ಪೋಷಕರೆ ಟಿ.ವಿ ಮೊಬೈಲ್ ಬಿಡಿ ಮಕ್ಕಳ ಭವಿಷ್ಯಕ್ಕಾಗಿ ಪುಸ್ತಕಗಳ ಓದಿ
ಅಮೃತಾಪುರ ಶಾಲೆಯಲ್ಲಿ ಓದು ಅಭಿಯಾನಕ್ಕೆ ಚಾಲನೆ
ಹೊಳಲ್ಕೆರೆ : ಮೊಬೈಲ್, ಟಿವಿಯಂತಹ ಆಕರ್ಷಕವೆನಿಸುವ ಸಮೂಹ ಮಾಧ್ಯಮಗಳ ಅತಿಯಾದ ಬಳಕೆಯಿಂದ ಇಂದಿನ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಓದುವ ಹವ್ಯಾಸ ಬೆಳೆಸಲು ಶಾಲಾ ಶಿಕ್ಷಕರ ಜೊತೆ ಮನೆಯಲ್ಲಿ ಪೋಷಕರು ಸಹ ಮಕ್ಕಳ ಜೊತೆ ಕೂತು ಓದುವ ರೂಢಿ ಬೆಳೆಸಿಕೊಳ್ಳಬೇಕು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಟಿ.ಪಿ.ಉಮೇಶ್ ಹೇಳಿದರು.
ಅಮೃತಾಪುರ ಪ್ರಾಥಮಿಕ ಶಾಲೆಯ ಗ್ರಂಥಾಲಯದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಓದುವ ಅಭಿಯಾನ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಓದಿನಿಂದಲೇ ಅರಿವು ಮೂಡುವುದು. ಇತಿಹಾಸ ತಿಳಿಯದೆ ಇತಿಹಾಸ ಸೃಷ್ಟಿಸಲಾಗದು. ಮಾನವನ ಆಧುನಿಕ ತಂತ್ರಜ್ಞಾನ ಶೈಕ್ಷಣಿಕ ವೈಮಾನಿಕ ವೈಜ್ಞಾನಿಕ ಆವಿಷ್ಕಾರಗಳ ಹಿಂದೆ ಅಪಾರವಾದ ಅಧ್ಯಯನದ ಬಲವಿದೆ. ಚಿಂತನ ಮಂಥನ ಸಂಶೋಧನೆಗಳ ಹಿನ್ನೆಲೆಯಿದೆ. ಇದನ್ನೆಲ್ಲ ಅರಿಯಲು ಶ್ರಮಿಸದ ಇಂದಿನ ಮಕ್ಕಳು ವರ್ಣರಂಜಿತ ಸಿನೆಮಾ ಗೇಮಿಂಗ್ ಯೂಟೂಬ್ ರೀಲ್ಸಗಳ ಆಕರ್ಷಣೆಗೆ ಬಹುಬೇಗ ಬಲಿಯಾಗುತ್ತಾರೆ. ಅವುಗಳಲ್ಲೇ ಬಹಳ ಸಮಯ ಪೋಲು ಮಾಡುತ್ತಾರೆ. ಶಾಲೆ ಕಾಲೇಜು ಪಠ್ಯ ಪುಸ್ತಕ ಓದಿನ ಕಡೆ ವಿವಿಧ ಕಲೆ ಸಾಹಿತ್ಯ ಸಾಂಸ್ಕೃತಿಕ ವಿಚಾರಗಳ ಕುರಿತು ಆಸಕ್ತಿ ಕಡಿಮೆ ಮಾಡಿಕೊಳ್ಳುತ್ತಾರೆ. ಇದರಿಂದ ಭವಿಷ್ಯದಲ್ಲಿ ಗೊತ್ತು ಗುರಿಯಿಲ್ಲದ, ಕೌಟುಂಬಿಕ ಜವಾಬ್ದಾರಿ ಮರೆತಂತಹ ನೈತಿಕತೆ ಇಲ್ಲದ ಜನಾಂಗದ ಸೃಷ್ಟಿಯಾದರು ಅಚ್ಚರಿಯಿಲ್ಲ. ನಾವು ಮಕ್ಕಳನ್ನು ದೂಷಿಸುವುದಕ್ಕಿಂತ ಪಾಲಕರು ಹಾಗು ಶಿಕ್ಷಕರು ಸಹ ಮಕ್ಕಳ ಜೊತೆಯಿದ್ದಾಗ ಮೊಬೈಲಗಳ ಬದಿಗಿಟ್ಟು ಟವಿಗಳ ಆಪ್ ಮಾಡಿ ಓದಲು ಬರೆಯಲು ಕೂತುಕೊಳ್ಳಬೇಕು. ಹಿರಿಯರು ಮೊದಲು ಮಕ್ಕಳಿಗೆ ಅನುಕರಣಾಯೋಗ್ಯ ವ್ಯಕ್ತಿಗಳಾಗಬೇಕು. ವಿಶ್ವಮಾನ್ಯ ವ್ಯಕ್ತಿಗಳಾದ ವಿವೇಕಾನಂದ, ಗಾಂಧೀಜಿ, ನೆಹರೂ, ಅಂಬೇಡ್ಕರ್, ವಿಶ್ವೇಶ್ವರಯ್ಯ ಮೊದಲಾದ ನೂರಾರು ಮಹನೀಯರು ಜೀವನದ ಕಡೆಯವರೆಗು ಉತ್ತಮ ಪುಸ್ತಕಗಳ ಓದುತ್ತಲೇ ಸಾಧಕರಾದರು. ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸಲು ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆಯವರು ಇಪ್ಪತ್ತೊಂದು ದಿನಗಳ ಓದುವ ಅಭಿಯಾನ ಸೆಪ್ಟೆಂಬರ್ ತಿಂಗಳಲ್ಲಿ ಆರಂಭಿಸದೆ. ಇದನ್ನು ವಿದ್ಯಾರ್ಥಿಗಳಲ್ಲಿ ಶಾಲಾ ಗ್ರಂಥಾಲಯ ಪುಸ್ತಕಗಳ ಓದುವ ಅಭ್ಯಾಸ ಮಾಡಿಸಲು ಬಳಸಿಕೊಳ್ಳೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಬೆಳಗಿನ ಅವಧಿ ಓದುವ ಕಾರ್ಯದಲ್ಲಿ ತೊಡಗಿದರು. ಶಾಲಾ ಮುಖ್ಯ ಶಿಕ್ಷಕರಾದ ಡಿ.ಸಿದ್ಧಪ್ಪ ಸಹಶಿಕ್ಷಕರಾದ ಟಿ.ಪಿ.ಉಮೇಶ್, ಜಿ.ಎನ್.ರೇಷ್ಮಾ ಹಾಗು ವಿದ್ಯಾರ್ಥಿಗಳು ಭಾಗಿಯಾದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030