ಸಚಿವರಿಂದ ಸಂಸದರ ಕಚೇರಿ ಉದ್ಘಾಟನೆ
ಹಾಸನ : ಜಿಲ್ಲಾಧಿಕಾರಿ ಕಚೇರಿ ಕಟ್ಟಡಲ್ಲಿ ಇಂದು ಸಂಸದರ ಕಚೇರಿಯನ್ನು ಸಹಕಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್. ರಾಜಣ್ಣ ಅವರು ಉದ್ಘಾಟಿಸಿದರು.
ನೂತನ ಕಚೇರಿಯಲ್ಲಿ ಸಂವಿಧಾನದ ಪೀಠಿಕೆಗೆ ಪುಷ್ಪಾರ್ಚನೆ ಮಾಡಿದ
ಬಳಿಕ ಮಾತನಾಡಿದ ಸಚಿವರು ಜನರಿಗೆ ಸುಲಭವಾಗಿ ಸಿಗುವ ನಿಟ್ಟಿನಲ್ಲಿ ಕಚೇರಿಯನ್ನು ಬಳಸಿಕೊಂಡು ಜನರ ಅಹವಾಲು ಸ್ವೀಕರಿಸಿ ಬಗೆಹರಿಸುವ ಮೂಲಕ ಜನರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.
ಪ್ರತಿಯೊಬ್ಬ ಜನಪ್ರತಿನಿಧಿಗಳು ತಮ್ಮ ಅವಧಿಯಲ್ಲಿ ಮಾಡುವ ಒಳ್ಳೆಯ ಕೆಲಸಗಳ ಮೇಲೆ ಅವರ ಹೆಸರು ಚಿರಸ್ಥಾಯಿ ಯಾಗಿ ಉಳಿಯಲಿದೆ. ಅದೇ ರೀತಿ ಶ್ರೇಯಸ್ ಪಟೇಲ್ ಕೂಡ ತನ್ನ ಅಧಿಕಾರಾವಧಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತಾಗಲಿ ಎಂದು ಆಶಿಸಿದರು.
ಶ್ರೇಯಸ್ ಪಟೇಲ್ ಸಂಸದರಾಗಿ ಜಿಲ್ಲೆಯ ಎಲ್ಲಾ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳ್ಳೆಯ ಅಭಿವೃದ್ದಿ ಕೆಲಸಗಳನ್ನು ಮಾಡುವ ಮೂಲಕ ಜನರ ಆಶೀರ್ವಾದ ಪಡೆಯಲಿ ಎಂದು ತಿಳಿಸಿದರು.
ಸಂಸದರಾದ ಶ್ರೇಯಸ್ ಪಟೇಲ್ ಅವರು ಮಾತನಾಡಿ ಜನರ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡುವ ನಿಟ್ಟಿನಲ್ಲಿ ತನ್ನ ಅಧಿಕಾರದ ಅವಧಿಯುದ್ದಕ್ಕೂ ಪ್ರಾಮಾಣಿಕ ಪ್ರಯತ್ನ ಮಾಡುವೆ, ವಾರದಲ್ಲಿ ನಿಗದಿತ ಎರಡು ದಿನ ಕಚೇರಿಯಲ್ಲಿ ಇದ್ದು ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಜನರ ಸಹಕಾರದೊಂದಿಗೆ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ ಜೊತೆಗೆ ಜನರ ಅಹವಾಲುಗಳನ್ನು ಪಡೆದು ಅವರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುವೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಮತ್ತಿತರರು ಹಾಜರಿದ್ದು ಸಂಸದರಿಗೆ ಶುಭ ಹಾರೈಸಿದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030