ಪುಸ್ತಕ ಜ್ಞಾನದ ಜೊತೆಗೆ ಸಾಮಾಜಿಕ ಜ್ಞಾನ ಮಹಿಳೆಯರಿಗೆ ಅತ್ಯಗತ್ಯ. ಡಾ. ನಾಗಲಕ್ಷ್ಮಿ ಚೌಧರಿ ಅಭಿಮತ.
ಬೆಂಗಳೂರು ನಗರ ಜಿಲ್ಲೆ, : ಮಹಿಳೆಯರಿಗೆ ವಿದ್ಯೆಯ ಜೊತೆಗೆ ಸಾಮಾಜಿಕ ಆಗುಹೋಗುಗಳ ಅರಿವು ಇಂದಿನ ಪೀಳಿಗೆಗೆ ಅತ್ಯಗತ್ಯವಾಗಿದೆ ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಅವರು ತಿಳಿಸಿದರು.
ಅವರು ಇಂದು ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಎಸಿಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಾಗೂ ಮಹಿಳಾ ಬೋಧಕರೊಂದಿಗೆ ನಡೆದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಬೆಳೆಯುತ್ತಿರುವ ನಗರಗಳಲ್ಲಿ ಮತ್ತು ಗ್ರಾಮೀಣ ಭಾಗಗಳಲ್ಲಿಯೂ ಸಹ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ, ಮಹಿಳೆಯರಲ್ಲಿ ಕಾನೂನಿನ ಅರಿವು ಇಲ್ಲದೆ ಇರುವುದೇ ಇದಕ್ಕೆ ಕಾರಣ ಎಂದು ವಿಷಾಧ ವ್ಯಕ್ತಪಡಿಸಿದರು.
ಶಿಕ್ಷಣ ಸಂಸ್ಥೆಗಳಲ್ಲಿಯೂ ಸಹ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿದೆ. ಹೆಣ್ಣು ಮಕ್ಕಳ ದೌರ್ಬಲ್ಯ ಮತ್ತು ಪ್ರಶ್ನೆ ಮಾಡಲು ಇರುವ ಸಂಕೋಚ ಸ್ವಭಾವವೇ ಇದಕ್ಕೆ ಕಾರಣ. ಹಾಗಾಗಿ ವಿದ್ಯಾರ್ಥಿಗಳ ಮೇಲೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾನೂನು ವ್ಯವಸ್ಥೆ ಅಡಿಯಲ್ಲಿ ನಾವುಗಳು ನಮಗೆ ದೊರೆಯಬೇಕಾದ ಹಕ್ಕುಗಳ ಬಗ್ಗೆ ಸದಾ ಜಾಗೃತರಾಗಿರಬೇಕು ಮತ್ತು ಅದನ್ನು ಪಡೆಯುವ ಛಲ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು ಹಾಗಾದಾಗ ಮಾತ್ರ ಮಹಿಳೆಯರ ಪ್ರಾಣ ಮತ್ತು ಮಾನ ಎರಡನ್ನು ರಕ್ಷಿಸಬಹುದು ಎಂದು ಅವರು ಅಭಿಪ್ರಾಯ ಪಟ್ಟರು.
ವಿದ್ಯೆಯ ಜೊತೆಗೆ ಸಾಮಾಜಿಕ ಜ್ಞಾನ ಕೂಡ ಅತ್ಯಗತ್ಯ. ಪ್ರಪಂಚದಲ್ಲಿ ನಡೆಯುತ್ತಿರುವ ಎಲ್ಲ ಸಂಗತಿಗಳು ನಮಗೆ ಮೊಬೈಲ್ ಮೂಲಕ ತಿಳಿಯುತ್ತದೆ. ಆದರೆ ವಿದ್ಯಾರ್ಥಿಗಳ ಮೇಲೆ ನಡೆಯುವ ದೌರ್ಜನ್ಯಗಳು ಮರೆಯಾಗಿ ಅವರ ಭವಿಷ್ಯ ಕುಂದುತ್ತಿದೆ. ಈ ನಿಟ್ಟಿನಲ್ಲಿ ಮಹಿಳಾ ಆಯೋಗವು ಸದಾ ವಿದ್ಯಾರ್ಥಿನಿಯರ ಪರವಾಗಿ ಮತ್ತು ನಾಡಿನ ಸಮಸ್ತ ಮಕ್ಕಳು ಮತ್ತು ಮಹಿಳೆಯರ ಪರವಾಗಿ ಹೋರಾಟ ಮಾಡುತ್ತಾ ಬಂದಿದೆ ಎಂದರು.
ಕಾಲೇಜು ಕ್ಯಾಂಪಸ್ ಗಳಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ, ಸುವ್ಯವಸ್ಥೆ ಮತ್ತು ಭದ್ರತೆ ನೋಡಿಕೊಳ್ಳುವುದು ಆಡಳಿತ ಮಂಡಳಿಯ ಅತ್ಯಂತ ಪ್ರಮುಖ ಜವಾಬ್ದಾರಿಯಾಗಿದೆ. ಕಾಲೇಜಿನಲ್ಲಿ ಯುವಕ-ಯುವತಿಯರಿಗೆ ಅರಿವು ಮೂಡಿಸುವಂತಹ ಹಾಗೂ ಭಾರತದ ನೀತಿ ಸಂಹಿತೆಯನ್ನು ತಿಳಿಸುವಂತಹ ಕಾರ್ಯ್ರಮಗಳನ್ನು ಆಯೋಜಿಸಿ, ವಿದ್ಯಾರ್ಥಿನಿಯರ ಸುರಕ್ಷತೆ ಕುರಿತು ಇರುವ ಎಲ್ಲಾ ವ್ಯವಸ್ಥೆಗಳನ್ನು ಕಾಲೇಜಿನಲ್ಲಿ ರೂಪಿಸಿ, ವಿದ್ಯಾರ್ಥಿಗಳ ವಿಷಯದಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡಿ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಆನಂದತೀರ್ಥ.ಬಿ.ಗುಡಿ ಅವರಿಗೆ ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಮಹಿಳಾ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವಂತಹ ಅರಿವು ಕಾರ್ಯಕ್ರಮಗಳನ್ನು ಕಾಲೇಜುಗಳಲ್ಲಿ ಹಮ್ಮಿಕೊಳ್ಳಿ ಎಂದು ಮಕ್ಕಳ ಅಭಿವೃದ್ದಿ ಯೋಜನಾಧಿಕಾರಿ ಆರತಿ ಬಿ.ವಿ ಅವರಿಗೆ ಸಲಹೆ ನೀಡಿದರು.ಮಹಿಳಾ ಆಯೋಗಕ್ಕೆ ಯಾವುದೇ ಸಂದರ್ಭದಲ್ಲಿ ಯಾವುದೇ ದೂರುಗಳನ್ನು ತಂದರೆ ಕಾನೂನಾತ್ಮಕವಾದ ಹೋರಾಟದ ಮೂಲಕ ಅವರಿಗೆ ನ್ಯಾಯ ಒದಗಿಸಿಕೊಡುವುದು ನಮ್ಮ ಆದ್ಯ ಕರ್ತವ್ಯ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಮಾಗಡಿ ಡಿವೈಎಸ್ಪಿ ಪ್ರವೀಣ್, ಕುಂಬಳಗೂಡು ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ಹೂಗಾರ್ ಹಾಗೂ ಕಾಲೇಜಿನ ಮಹಿಳಾ ಬೋಧಕರು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030