ಡಬಲ್ ಪೇಮೆಂಟ್ ಹಗರಣ; ಧಾರವಾಡ ಕೆಐಎಡಿಬಿ ನಿವೃತ್ತ ಭೂಸ್ವಾಧೀನಾಧಿಕಾರಿ ಸೇರಿ ಇಬ್ಬರು ಇಡಿ ವಶಕ್ಕೆ
ಕೆಐಎಡಿಬಿ(KIADB)ಯಲ್ಲಿ ನಕಲಿ ರೈತರ ಖಾತೆಗಳನ್ನು ಸೃಷ್ಟಿಸಿ, ಇಲಾಖೆಯ ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿದ್ದ ವ್ಹಿ. ಡಿ. ಸಜ್ಜನ್ ಸೇರಿ ಹಲವರು ಜೈಲು ಸೇರಿದ್ದರು. ಇದೀಗ ಈ ಇಬ್ಬರನ್ನು ಇಡಿ(ED) ವಶಕ್ಕೆ ಪಡೆದಿದ್ದು, ಇಬ್ಬರನ್ನು ವಾಹನದಲ್ಲಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.
ಧಾರವಾಡ, : ಕೆಐಎಡಿಬಿ(KIADB) ಡಬಲ್ ಪೇಮೆಂಟ್ ಹಗರಣಕ್ಕೆ ಸಂಬಂಧಿಸಿದಂತೆ ನಿವೃತ್ತ ವಿಶೇಷ ಭೂಸ್ವಾಧೀನಾಧಿಕಾರಿ ವಿ.ಡಿ. ಸಜ್ಜನ್ ಹಾಗೂ ಕೆಐಎಡಿಬಿಯಲ್ಲಿ ಏಜೆಂಟ್ ಆಗಿ ಕೆಲಸ ಮಾಡ್ತಿದ್ದ ಅಶ್ಫಾಕ್ ದುಂಡಸಿ ಇಬ್ಬರನ್ನು ಇಡಿ(ED) ವಶಕ್ಕೆ ಪಡೆದಿದ್ದು, ಇಬ್ಬರನ್ನು ವಾಹನದಲ್ಲಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಜಾಮೀನು ಸಿಗದ ಹಿನ್ನೆಲೆ ಈ ಇಬ್ಬರು ಧಾರವಾಡ ಜಿಲ್ಲಾ ಕಾರಾಗೃಹದಲ್ಲಿದ್ದರು. ಇತ್ತೀಚೆಗೆ ಕೆಐಎಡಿಬಿ ಕಚೇರಿ ಮೇಲೆ ದಾಳಿ ಮಾಡಿದ್ದ ಇಡಿ ತಂಡ, ಅನೇಕ ದಾಖಲೆ ಪತ್ರ ವಶಕ್ಕೆ ಪಡೆದು ಪರಿಶೀಲನೆ ನಡೆಸಿತ್ತು. ಅದರಂತೆ ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ ಇಬ್ಬರನ್ನೂ ಕರೆದೊಯ್ಯಲಾಗಿದೆ.
ಏನಿದು ಘಟನೆ?
ಕೆಐಎಡಿಬಿ(KIADB)ಯಲ್ಲಿ ನಕಲಿ ರೈತರ ಖಾತೆಗಳನ್ನು ಸೃಷ್ಟಿಸಿ, ಇಲಾಖೆಯ ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿದ್ದ ವ್ಹಿ. ಡಿ. ಸಜ್ಜನ್ ತಮ್ಮ ನಿವೃತ್ತಿಯ ಕೊನೆಯ ದಿನವೇ 30 ಕೋಟಿ ರೂಪಾಯಿ ಹಣವನ್ನು ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿತ್ತು. ಅದರಲ್ಲಿ ಸಜ್ಜನ್ ಮೊದಲನೇ ಆರೋಪಿ ಆಗಿ, ಜೈಲು ಸೇರಿದ್ದರು. ಡಬಲ್ ಪೇಮೆಂಟ್ ಕುರಿತು ಸಿಐಡಿ ತನಿಖೆಯ ಚಾರ್ಜ್ ಶೀಟ್ನಲ್ಲಿ ಒಂದೇ ದಿನದಲ್ಲಿ 30 ಕೋಟಿ ರೂಪಾಯಿ ಹಣ ವರ್ಗಾವಣೆ ಬಗ್ಗೆ ಆರೋಪಿಸಲಾಗಿತ್ತು. ಇದೇ ವೇಳೆ ಸಿಐಡಿ ತನಿಖೆಯಲ್ಲಿ ಸಾಕಷ್ಟು ಲೋಪಗಳಾಗಿವೆ ಎನ್ನುವ ಆರೋಪವೂ ಕೇಳಿ ಬಂದಿತ್ತು. ಈ ಹಿನ್ನಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಎಂಟ್ರಿ ಕೊಟ್ಟು ಕೆಐಎಡಿಬಿ ಕಚೇರಿಗೆ ದಾಳಿ ಮಾಡಿತ್ತು.
ಸರ್ಕಾರ ಹಾಗೂ ರೈತರ ನಡುವೆ ಕೆಲಸ ಮಾಡುವ ಇಲಾಖೆ ಇದಾಗಿದ್ದು, ರೈತರಿಂದ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಕೈಗಾರಿಕೆಗಳಿಗೆ ನೀಡಲಾಗುತ್ತದೆ. ಆದರೆ, ಇದನ್ನೇ ದಂಧೆ ಮಾಡಿಕೊಂಡ ಅಧಿಕಾರಿಗಳು ಹಾಗೂ ಏಜೆಂಟರು ನಿರಂತರವಾಗಿ ಹಣವನ್ನು ಲೂಟಿ ಮಾಡುತ್ತಲೇ ಬಂದಿದ್ದಾರೆ. ಇದೀಗ ಜಾರಿ ನಿರ್ದೇಶನಾಲಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ಶುರು ಮಾಡಿದೆ. ಈ ತನಿಖೆಯಲ್ಲಿ ಮತ್ತೆ ಯಾವೆಲ್ಲ ಹೊಸ ಅಕ್ರಮಗಳು ಹೊರಗೆ ಬರುತ್ತವೆಯೋ ಕಾದು ನೋಡಬೇಕಿದೆ…
ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030