ಧಾರವಾಡ | ವಸತಿ ಯೋಜನೆಯಡಿ ಮನೆ ನೀಡುವಂತೆ ಪೌರಕಾರ್ಮಿಕರ ಒತ್ತಾಯ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 2,165 ಮಂದಿ ಪೌರಕಾರ್ಮಿಕರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಹಾಗೂ ರಾಜೀವ್ಗಾಂಧಿ ವಸತಿ ಯೋಜನೆಯಡಿ ಉಚಿತ ಮನೆಗಳನ್ನು ನಿರ್ಮಿಸಿಕೊಡುವಂತೆ ಆಗ್ರಹಿಸಿ ಪೌರಕಾರ್ಮಿಕರು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿಯವರಿಗೆ ಮನವಿ ಸಲ್ಲಿಸಿದರು.
ಧಾರವಾಡ ನಗರದ ವಾರ್ಡ್ ನಂ.81ರಲ್ಲಿ ಬರುವ ಕರ್ಕಿಬಸವೇಶ್ವರ ನಗರದಿಂದ ಮಂಟೂರ ರಸ್ತೆಗೆ ಹೊಂದಿಕೊಂಡಿರುವ ಯಲ್ಲಾಪುರ ಗ್ರಾಮದಲ್ಲಿ ಪಾಲಿಕೆ ಒಡೆತನದ 2 ಎಕರೆ 17 ಗುಂಟೆ ಖುಲ್ಲಾ ಜಾಗವಿದ್ದು, ಸದರಿ ಜಮೀನು ಖಾಲಿ ಇದೆ” ಎಂದು ಪೌರಕಾರ್ಮಿಕರು ತಿಳಿಸಿದರು.
“ಯಲ್ಲಾಪುರ ಗ್ರಾಮದ ಮಂಜುನಾಥ ಹನುಮಂತಪ್ಪ ಚನ್ನೋಜಿ ಮತ್ತು ರಮೇಶ ಹನುಮಂತಪ್ಪ ಚನ್ನೋಜಿ ಸದರಿ ಜಮೀನು 5 ಎಕರೆ 6 ಗುಂಟೆ ಇದ್ದು, ಸದರಿಯವರು ಪೌರಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿಕೊಡುವ ಉದ್ದೇಶದಿಂದ ಸದರಿ ಜಮೀನನ್ನು ದಾನಪತ್ರ ಮೂಲಕ 2012ರಲ್ಲಿ ಧಾರವಾಡದ ಸಹಾಯಕ ಕಾರ್ಯಪಾಲಕ ಅಭಿಯಂತರರು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಉಪವಿಭಾಗಕ್ಕೆ ದಾನವಾಗಿ ನೀಡಿದ್ದಾರೆ” ಎಂದು ಮನವಿಯಲ್ಲಿ ತಿಳಿಸಿದ್ದಾರೆ.
“12 ವರ್ಷಗಳು ಗತಿಸಿದರೂ ದಾನಿಗಳ ಉದ್ದೇಶ ಈಡೇರದೇ ಅರ್ಹ ಪೌರಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಪಾಲಿಕೆಯ ಪೌರಕಾರ್ಮಿಕರು ಅವಳಿನಗರದ ಸ್ವಚ್ಛತೆಗಾಗಿ ತಮ್ಮ ಜೀವದ ಹಂಗುತೊರೆದು ನಾಗರಿಕರ ಆರೋಗ್ಯ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಸದರಿ ಪೌರಕಾರ್ಮಿಕರು ಹಾಗೂ ವಸತಿಹೀನರು ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತ ಆರ್ಥಿಕನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಉಚಿತ ಮನೆಗಳನ್ನು ನಿರ್ಮಿಸಿ ಕೊಡಬೇಕು” ಎಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಡಾ. ವಿಜಯ ಗುಂಟ್ರಾಳ, ಬಸಪ್ಪ ಮಾದರ, ಗಾಳೆಪ್ಪ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ಸೋಮು ಮೊರಬದ, ಅನಿತಾ ಎನಗೊಂಡ, ನೀಲವ್ವ ಬೆಳವಟಗಿ, ಪಾರವ್ವ ಹೊಸಮನಿ, ಯಲ್ಲಪ್ಪ ಪಾಳೇದ, ರೇಣುಕಾನಾಗರಾಳ, ಲಕ್ಷ್ಮೀ ವಾಲಿ, ತಾಯಪ್ಪ ಕಣೇಕಲ್, ಗಂಗಾಧರ ದೊಡ್ಡಮನಿ, ಬಸವರಾಜ ಕುರಕುಂದಿ, ಪರಶುರಾಮ ಕಡಕೋಳ, ಮರೆಪ್ಪ ಬುಕನಟ್ಟಿ ಇದ್ದರು…
ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030