ಜಿಲ್ಲೆಯ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಸಮಗ್ರ ಪುಸ್ತಕ ಪ್ರಕಟಿಸುವ ಅಗತ್ಯವಿದೆ ಶಾಸಕ ಅರವಿಂದ ಬೆಲ್ಲದ…!!!

Listen to this article

ಜಿಲ್ಲೆಯ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಸಮಗ್ರ ಪುಸ್ತಕ ಪ್ರಕಟಿಸುವ ಅಗತ್ಯವಿದೆ; ಜಿಲ್ಲಾಡಳಿತದ ವಿನೂತನ ಪ್ರಯತ್ನ ಅಭಿನಂದನಾರ್ಹವಾದದ್ದು;ಉಪನಾಯಕ ಅರವಿಂದ ಬೆಲ್ಲದ

ಧಾರವಾಡ : ಸಾಂಪ್ರದಾಯಕ ಸ್ವಾತಂತ್ರ್ಯೋತ್ಸವದ ಜೊತೆಗೆ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಘಟನೆಗಳು, ಐತಿಹಾಸಿಕತೆಗಳನ್ನು ಮೆಲುಕು ಹಾಕುವ ವಿಶಿಷ್ಟ ಪ್ರಯತ್ನವನ್ನು ಧಾರವಾಡ ಜಿಲ್ಲಾಡಳಿತ ಈ ವರ್ಷ ಮಾಡಿದೆ. ನಮ್ಮ ಬಗ್ಗೆ ನಾವು ಹೆಮ್ಮೆ ಪಡುವ ಅನೇಕ ಸಂಗತಿಗಳನ್ನು ತಿಳಿಸಲು ಪ್ರಯತ್ನ ಮಾಡಿದ ಧಾರವಾಡ ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿತ ಅಭಿನಂದನಾರ್ಹವಾಗಿದೆ ಎಂದು ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ಉಪನಾಯಕರಾದ ಶಾಸಕ ಅರವಿಂದ ಬೆಲ್ಲದ ಅವರು ಹೇಳಿದರು.

ಅವರು ಇಂದು ಬೆಳಿಗ್ಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಧಾರವಾಡ ಪ್ರಾದೇಶಿಕ ಪತ್ರಗಾರ ಇಲಾಖೆಯಿಂದ ಸ್ವಾತಂತ್ರ್ಯ ಸಂಭ್ರಮಾಚರಣೆ ನಿಮಿತ್ತ ಆಗಸ್ಟ್ 12 ರಿಂದ 14 ರವರೆಗೆ ಮೂರುದಿನಗಳವರೆಗೆ ಆಯೋಜಿಸಿರುವ ಐತಿಹಾಸಿಕ ದಾಖಲೆ ಹಾಗೂ ಛಾಯಾಚಿತ್ರಗಳ ಪ್ರದರ್ಶನವನ್ನು ಉದ್ಘಾಟಿಸಿ, ಮಾತನಾಡಿದರು.

ಮುಂಬೈ ಪ್ರಾಂತ್ಯದ ಸ್ವಾತಂತ್ರ್ಯ ಹೋರಾಟಗಳ ನೇರ ಪ್ರಭಾವಕ್ಕೆ ಒಳಗಾಗಿದ್ದ ಧಾರವಾಡ, ಬೆಳಗಾವಿ ಸೇರಿ ಉತ್ತರ ಕರ್ನಾಟಕದ ಭಾಗದ ಜನರು ನಿರಂತರವಾಗಿ ಚಳುವಳಿಗಳಲ್ಲಿ ಭಾಗವಹಿಸಿದ್ದಾರೆ. ಎಲ್ಲ ರೀತಿಯ ಹೋರಾಟಗಳಲ್ಲಿ ಪಾಲ್ಗೊಂಡು ತಮ್ಮ ಕುಟುಂಬ, ಆಸ್ತಿ ಕಳೆದುಕೊಂಡಿದ್ದಾರೆ. ಅನೇಕರು ಬಲಿದಾನವಾಗಿದ್ದಾರೆ. ಈ ಸಂಗತಿಗಳನ್ನು ಮರು ದಾಖಲಿಸಿ, ಪುಸ್ತಕ ರೂಪದಲ್ಲಿ ಪ್ರಕಟಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಧಾರವಾಡದ ಅನೇಕ ಹೋರಾಟಗಾರರು ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಅವರ ಕುರಿತು ಹೆಚ್ಚಿನ ಅಧ್ಯಯನದ ಅಗತ್ಯವಿದೆ. ಸಂಶೋಧಕರು ಅಖಂಡ ಧಾರವಾಡ ಜಿಲ್ಲೆಯನ್ನು ಅನುಲಕ್ಷಿಸಿ ಸ್ವಾತಂತ್ರ್ಯ ಸಂಗ್ರಾಮವನ್ನು ಅಧ್ಯಯನ ಮಾಡಿ, ಪುಸ್ತಕ ಪ್ರಕಟಿಸಬೇಕೆಂದು ಶಾಸಕ ಅರವಿಂದ ಬೆಲ್ಲದ ಅವರು ತಿಳಿಸಿದರು.

ಮುಖ್ಯ ಅತಿಥಿಗಳಾಗಿದ್ದ ಶಾಸಕ ಎನ್.ಎಚ್.ಕೋನರಡ್ಡಿ ಅವರು ಮಾತನಾಡಿ, ಉಪನ್ಯಾಸ, ವಸ್ತು ಮತ್ತು ಛಾಯಚಿತ್ರ ಪ್ರದರ್ಶನಗಳು ವಿದ್ಯಾಥಿಗಳಲ್ಲಿ, ಯುವಕರಲ್ಲಿ ಜಿಲ್ಲೆಯ ಬಗ್ಗೆ ಅರಿವು, ಸ್ವಾಭಿಮಾನ ಮೂಡಿಸುತ್ತವೆ. ಜಿಲ್ಲಾಡಳಿತದ ಈ ಪ್ರಯತ್ನ ಸತ್ತ್ಯಾರ್ಹವಾಗಿದೆ. ನರಗುಂದ, ನವಲಗುಂದ, ಹಾವೇರಿ, ಧಾರವಾಡದ ಅನೇಕ ಸ್ಥಳಗಳು ಚಳುವಳಿಗೆ ಹೆಸರಾಗಿದ್ದವು. ಮಹಾತ್ಮ ಗಾಂಧೀಜಿ, ನೇತಾಜಿ ಸುಭಾಸಚಂದ್ರ ಬೋಸ, ಬಾಲಗಂಗಾಧರ ತೀಲಕರಂತ ಅಪ್ರತಿಮ ಮಹಾನ ನಾಯಕರು ನಮ್ಮ (ಹಳೆಯ) ಧಾರವಾಡ ಜಿಲ್ಲೆಗೆ ಭೇಟಿ ನೀಡಿ, ಹೋರಾಟಗಳಲ್ಲಿ ಭಾಗವಹಿಸಿದ್ದನ್ನು ತಿಳಿದು, ನಮ್ಮಲ್ಲಿ ಸ್ವಾಭಿಮಾನದ ಗರ್ವ ಮೂಡುತ್ತಿದೆ ಎಂದರು.

ಸ್ವಾತಂತ್ರ್ಯ ಹೋರಾಟಗಳ ಹಿನ್ನಲೆಯಲ್ಲಿ ಅಖಂಡ ಧಾರವಾಡ ಜಿಲ್ಲೆಯ ಸಮಗ್ರ ಅಧ್ಯಯನ ಮತ್ತು ಸಂಶೋಧನೆಯ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಪ್ರಬುದ್ಧರ, ಶಿಕ್ಷಿತರ ನಾಡಾಗಿರುವ ಧಾರವಾಡ ಜಿಲ್ಲೆಯು, ರಾಷ್ಟ್ರೀಯ ಚಳುವಳಿಗೆ ಮಹತ್ವದ ಕೊಡುಗೆ ನೀಡಿದೆ. ಈ ಇತಿಹಾಸದ ಕುರಿತು ವಿದ್ಯಾರ್ಥಿಗಳಲ್ಲಿ, ಯುವ ಸಮುದಾಯದಲ್ಲಿ ಜಾಗೃತಿ ಮೂಡಿಸುವಂತೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಸ್ವಾತಂತ್ರ್ಯದ ಸಂಭ್ರಮವನ್ನು ಕಳೆದ ಆಗಸ್ಟ್ 1 ರಿಂದ 14 ರವರೆಗೆ ವಿವಿಧ ಸ್ವರೂಪದ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುತ್ತಿದೆ. ಇದಕ್ಕೆ ಸಾರ್ವಜನಿಕರ, ವಿದ್ಯಾರ್ಥಿಗಳ ಮತ್ತು ಯುವ ಸಮೂಹದಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ತಿಳಿಸಿದರು.

ಈಗಾಗಲೇ ಜಿಲ್ಲೆಯ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು, ಹೋರಾಟದ ಸ್ಥಳಗಳು, ಘಟನೆಗಳ ಕುರಿತು ಕಾಲೇಜುಗಳಲ್ಲಿ 77 ಸರಣಿ ಉಪನ್ಯಾಸಗಳನ್ನು ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಆಯೋಜಿಸಲಾಗುತ್ತಿದೆ. ಕಾರ್ಯಕ್ರಮದ ನಂತರ ಅಖಂಡ ಧಾರವಾಡ ಜಿಲ್ಲೆಯ ಸ್ವಾತಂತ್ರ್ಯದ ಸಮಗ್ರ ಇತಿಹಾಸವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಉದ್ದೇಶವಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಲೋಕಸಭಾ ಸದಸ್ಯ ಐ.ಜಿ.ಸನದಿ, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ, ಇತಿಹಾಸ ತಜ್ಞ, ಪ್ರಾಧ್ಯಾಪಕ ಡಾ.ಐ.ಕೆ ಪತ್ತಾರ, ಗೋವಾ ಪತ್ರಗಾರ ಇಲಾಖೆ ನಿವೃತ್ತ ನಿರ್ದೇಶಕ ಡಾ.ಅರವಿಂದ ಯಾಳಗಿ, ಹಿರಿಯ ಕಲಾವಿದ ಬಿ. ಮಾರುತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಹಾಗೂ ಆರ್.ಎಲ್.ಎಸ್. ಪ್ರೌಢಶಾಲೆ, ಅಂಜುಮನ ಪ್ರೌಡಶಾಲೆ, ಕಾಲೇಜು ವಿದ್ಯಾರ್ಥಿಗಳು ಇದ್ದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸ್ವಾಗತಿಸಿದರು. ಪ್ರಾದೇಶಿಕ ಪತ್ರಗಾರ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಡಾ. ಮಂಜುಳಾ ಯಲಿಗಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಬಾಕ್ಸ ಐಟಮ್: ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಐತಿಹಾಸಿಕ ದಾಖಲೆಗಳ ಹಾಗೂ ಛಾಯಚಿತ್ರಗಳ ಪ್ರದರ್ಶನವು ಆಗಸ್ಟ್ 12 ರಿಂದ ಆಗಸ್ಟ್ 15 ರವರೆಗೆ ಮುಂದುವರಿಯಲಿದ್ದು, ಸಾರ್ವಜನಿಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ, ಜಿಲ್ಲೆಯ ಇತಿಹಾಸ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿದುಕೊಳ್ಳಲು ಜಿಲ್ಲಾಧಿಕಾರಿ ದಿವ್ಯ ಪ್ರಭು ವಿನಂತಿಸಿದ್ದಾರೆ..

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend