ನೇರಳೆ ಹಣ್ಣು ಕಪ್ಪು ದೇಹಕ್ಕೆ ಬಲು ತಂಪು
ಇದು ನೇರಳೆ ಹಣ್ಣಿನ ಕಾಲ. (ಬೆಂಗಳೂರಿನಲ್ಲಿ ಕಾಲು ಕೆಜಿ ನೇರಳೆ ಹಣ್ಣಿಗೆ 50 ರೂಪಾಯಿ!) ಇದರ ಮತ್ತೊಂದು ಹೆಸರು “ಜಂಬೂಫಲ”.
ಜಲಜಾಂಬವ ಮೌಖಿಕ ಪುರಾಣ ದ ಪ್ರಕಾರ ಭಾರತ ದೇಶದ ಪೂರ್ವದ ಹೆಸರು “ಜಂಬೂದ್ವೀಪ.” ವಿಶ್ವ ಸೃಷ್ಟಿಯ ಮೂಲವಸ್ತುವಾದ ಪರಾತ್ಮರ (ಅತ್ಯಂತ ಶ್ರೇಷ್ಠ) ವಸ್ತುವನ್ನು ಕುರಿತು ತಿಳಿದುಕೊಳ್ಳಲು ಮಂಟೇಸ್ವಾಮಿ ಯು ತನ್ನ ಗುರುದೇವನಾದ “ಗುರುಬಾರಲಿಂಗಯ್ಯನ ಅನುಜ್ಞೆಯ ಮೇಲೆ” ದಕ್ಷಿಣದ ದ್ರಾವಿಡ ದೇಶದ ಕತ್ತಲರಾಜ್ಯ ದಿಂದ ಉತ್ತರ ದೇಶಕ್ಕೆ ಪ್ರಯಾಣಿಸಿದನು. ಅಲ್ಲಿ “ಗುರು ಕೊಡೇಕಲ್ ಬಸವಣ್ಣ” ನ ಬಳಿ ಯೋಗಸಿದ್ಧಿ, ರಸಸಿದ್ಧಿ, ಕಾಯಸಿದ್ಧಿ ಮುಂತಾದ ಸಿದ್ಧಿಗಳನ್ನು ಪಡೆದು ಕಡೆಗೆ ಪರಾತ್ಮರ ವಸ್ತುವು “ಜಂಬೂದ್ವೀಪದ ಜಾಂಬವಮುನಿ” ಯ ಬಳಿಯಲ್ಲಿದೆಯೆಂದು ತಿಳಿದನು. ಸೃಷ್ಟಿ ನಿಯಾಮಕನಾದ ಜಂಬೂಮುನಿಯನ್ನು ಧ್ಯಾನಿಸಿ ಪಾತಾಳ ಮಾರ್ಗದಲ್ಲಿ ಅಂತರ್ಧಾನವಾಗಿ ಹೋದ ಮಂಟೇಸ್ಯಾಮಿಯು ಚಿರಂಜೀವಿಯಾದ ಜಂಬೂಮುನಿಯಿಂದ ಪರಾತ್ಮರ ವಸ್ತುವನ್ನು ಭೂಮಿಗೆ ಮರಳಿತಂದು “ಧರೆಗೆ ದೊಡ್ಡವರು” ಎಂದು ಕರೆಸಿಕೊಂಡರೆಂದು ಈ ಮೌಖಿಕ ಪುರಾಣ ಸಾರುತ್ತದೆ.
ಅದಿರಲಿ, ವಿದ್ಯೆಯ ಅಧಿದೇವತೆ ಮಾತಂಗಿ (ಸರಸ್ವತಿ) ಯು ಜಂಬೂಫಲ ಪ್ರಿಯಳು. ಸಂಗೀತರಸಿಕೆಯೂ ಶಾಮಲವರ್ಣದವಳೂ ಆದ ಅವಳು ಕದಂಬ ವನವಾಸಿನಿಯಾಗಿರುವಂತೆಯೇ ಜಂಬೂ ನದಾದ್ರಿಯಲ್ಲಿ ಕ್ರೀಡಿಸುವವಳಾಗಿದ್ದಳು. ಕಾಳಿದಾಸ ಕವಿಯು ತನ್ನ ಶಾಮಲಾದೇವಿ ದಂಡಕ’ ದಲ್ಲಿ “ಮಾತಂಗ ಕನ್ಯಾ ಮನಸಾಸ್ಮರಾಮಿ” ಎಂದು ಈ ಜಂಬೂಫಲ ಪ್ರಿಯಳಾದ ಮಾತಂಗಿಯನ್ನು ಸ್ತುತಿಸಿದ್ದಾನೆ. ಈಗ ನಿಮಗೆ ನೇರಳೆಹಣ್ಣು ತಿನ್ನಬೇಕೆನ್ನಿಸಿದರೆ ಧರೆಗೆ ದೊಡ್ಡವರನ್ನೂ- ದೇವಿ ಮಾತಂಗಿಯನ್ನೂ- ಜಂಬೂಮುನಿಯನ್ನೂ- ಗುರು ಬಾರಲಿಂಗಯ್ಯನನ್ನೂ- ಜಂಬೂದ್ವೀಪದ ಜಂಬೂಫಲವನ್ನು ಕುರಿತ ಈ ನೆನಪು ದಾಟಿಸಿಕೊಂಡು ಬಂದಿರುವ ಮೌಖಿಕರನ್ನೂ ಸ್ಮರಣೆ ಮಾಡಿ ತಿನ್ನಿರಿ.
ಜಂಬೂಫಲದ ಕೆಲವು ನೆಲೆಗಳನ್ನು ಹೀಗೆ ಗುರುತಿಸಬಹುದು :
೧). ಭಾರತ ದೇಶಕ್ಕೆ – ಜಂಬೂ ದ್ವೀಪ ಎಂದು ಹೆಸರಿಸಲು ಕಾರಣವಾದದ್ದು ಈ ಜಂಬೂ ಫಲ.
೨). ಯೋಗಸಿದ್ಧಿ, ರಸಸಿದ್ಧಿ, ಕಾಯಸಿದ್ಧಿ ನಮ್ಮೊಳಗಿನ ಸತ್ವ, ರಜಸ್ಸು, ತಮಸ್ಸು ಗುಣಗಳನ್ನು ಪ್ರತಿನಿಧಿಸುತ್ತವೆ.
೩). ಮತಂಗ ತನಯಳೆನಿಸಿದ ಮಾತಂಗಿ (ಆದಿ ಪರಾಶಕ್ತಿ)ಕಪ್ಪು ವರ್ಣಾತ್ಮಿಕೆ. (ಕಾಳಿದಾಸ – ಸರ್ವ ಯಂತ್ರಾತ್ಮಿಕೆ ಸರ್ವ ತಂತ್ರಾತ್ಮಿಕೆ ಸರ್ವ ವರ್ಣಾತ್ಮಿಕೆ ಸರ್ವ ರೂಪೇ ಜಗನ್ಮಾತ್ರುಕೆ)ಅದಕ್ಕಾಗಿಯೇ ಈ ನೇರಳೆ ಹಣ್ಣು ಆಕೆಯ ಸ್ವರೂಪ.
೪). ಕರಿಮಣ್ಣಿನ ನೆಲ ಅಂದರೆ ಕರುನಾಡು ಕಪ್ಪು ಬಣ್ಣದ ಹಣ್ಣುಗಳಿಗೆ ಜಗತ್ ಪ್ರಸಿದ್ಧಿ. ಹಾಗಾಗಿ ನೇರಳೆ ಹಣ್ಣು ಈ ಮಣ್ಣಿನ ಗುಣವನ್ನು ಹೊತ್ತುಕೊಂಡಿರುವ ಹಣ್ಣು. ಅದಕ್ಕೆ ಈ ಹಣ್ಣು ಎಲ್ಲರಿಗೂ ಇಷ್ಟ.
೫).ಜಗದ್ ರಕ್ಷಕನಾದ ಶ್ರೀ ಕೃಷ್ಣನು ನೀಲಾ ಮೇಘ ಶ್ಯಾಮ (ಕಪ್ಪು ಬಣ್ಣದವನು) ನೇರಳೆ ಹಣ್ಣು ಅವನಿಗೆ ಸಮರ್ಪಣೆ.
ಹೀಗೆ ಗುರುತಿಸಿರುವ ನೆಲೆಗಳನ್ನು ವಿಸ್ತರಿಸಿ ನಾನು ಹೇಳುವುದೇನೆಂದರೆ :
ರಾಮ – ಕೃಷ್ಣ – ಈಶ್ವರ – ಗಣಪತಿ – ಬಾಲಾಜಿ ಮುಂತಾದ ದೇವಾನುದೇವತೆಗಳೆಲ್ಲರೂ ಕಪ್ಪುವರ್ಣೀಯರೇ ಆಗಿರುವರು. ದ್ರೌಪತಿಯೊಬ್ಬಳು ಕಪ್ಪು ವರ್ಣದ ಸುಂದರಿ. ಹೀಗೆ ಭಾರತ ದೇಶವೇ ಕಪ್ಪು ವರ್ಣವನ್ನು ತನ್ನ ಪ್ರಜ್ಞಾ ಕೇಂದ್ರದಲ್ಲಿರಿಸಿಕೊಂಡಿದೆ. ವೈದಿಕರು ತಮ್ಮ ಮಂತ್ರಗಳಲ್ಲಿಯೂ ”ಜಂಬೂದ್ವೀಪೇ… ಭರತಖಂಡೇ…” ಎಂದು ಸ್ತುತಿಸುತ್ತಲೇ ಈ ಕಪ್ಪುಬಣ್ಣದ ಪ್ರಜ್ಞಾಕೇಂದ್ರಕ್ಕೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಜಂಬೂಫಲ ತಂತ್ರಸಾಧಕರ ತಾಂತ್ರಿಕ ವಿದ್ಯೆಯಲ್ಲಿಯೂ ಬಳಕೆಯಾಗುತ್ತಿದೆ.
ಇನ್ನೊಂದು ತರ್ಕದ ಪ್ರಕಾರ ಜಂಬೂ ದ್ವೀಪದಲ್ಲಿದ್ದ ಆ ಮೂಲ ಪುರುಷ ಜಾಂಬವ ಅಲ್ಲ ಜಂಬೂವ. ಹೇಗೆಂದರೆ ಭಾರತಕ್ಕೆ ಮೊದಲಿದ್ದ ಹೆಸರು ಜಂಬೂದ್ವೀಪ. ಅಷ್ಟಕ್ಕೂ ಜಂಬೂ ಎಂದರೆ ಏನು? ಜಂಬೂ ಎಂದರೆ ಆನೆ ಹೌದಲ್ಲವೇ? (ಮೈಸೂರಿನ ಜಂಬೂಸವಾರಿ – ಆನೆ ಸವಾರಿ). ಹಾಗೆಯೇ “ಗಜ ” ಈ ಅರ್ಥವೂ ಆನೆಯ ಪಂಥದ ಹೆಸರನ್ನೇ ಸೂಚಿಸುತ್ತದೆ. ಉದಾ : ಮಾವುತ (ಆನೆ ಪಳಗಿಸುವ ಮಾಸ್ಟೀಕ).
ಶಿವನ ಉಪಾಸಕನಾದ ಘನಶರಣ ಮಾದಾರ ಚೆನ್ನಯ್ಯ ನು ಲಿಂಗಾರ್ಚನೆ ಮಾಡಲು ಬಳಸುತ್ತಿದ್ದ ಹಣ್ಣುಗಳಲ್ಲಿ ಜಂಬೂಫಲವೂ ಒಂದೆಂಬುದು ಗಮನಾರ್ಹ ಸಂಗತಿ.
“ಹಸಿದಯ್ಯ ಎನ್ನ ಜೀವದ ಜೀವವೇ ಎಂದು
ಉಸುರ ಸಂತೈಸುತೋವುತ್ತೆ ಹತ್ತಿರ ಬಂದು
ಜಂಬುಫಳ ಚೂತಫಳ ಮುಮನೊಲವಿನಿಂ ಕರಂ
ಇಂಬಿನಿಂದಾರೋಗಿಸಲ್ಕೊಟ್ಟನಂತರಂ
ತೂಪಿರಿದು ಕಾಪಿಟ್ಟು ಕಣ್ಗೊಳೊಳಗೊತ್ತುತಂ
ಭಾಪು ಭಾಗ್ಯವೆ ಎಂದು ಮುಂಡಾಡಿ ಪೆರ್ಚುತಂ
ಕರುಣಪ್ರಸಾದಮಂ ಪ್ರೇಮದಿಂ ಕೈಗೊಂಡು
ಹರಣ ಕಾರುಣ್ಯಮಂ ತಾನೊಚ್ಚತಂಗೊಂಡು”
(ಹರಿಹರನ ರಗಳೆಗಳು, ಪುಟ 470, ‘ಮಾದಾರ ಚೆನ್ನಯ್ಯನ ರಗಳೆ’ ಹರಿಹರ).
ಶಿವನಿಗೆ ಅರ್ಪಿತವಾದ ಇಂತಪ್ಪ ಜಂಬೂದ್ವೀಪದ ಜಂಬೂನೇರಳೆ ಹಣ್ಣನ್ನು ನಾವೆಲ್ಲರೂ ಹಿತವಾಗಿ ಸವಿಯೋಣ…
ವರದಿ.ಮ್ಯಾಗೇರಿ ಸಂತೋಷ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030