ಸೋಲೇ ಗೆಲುವಿನ ಸೋಪಾನ ಎನ್ನುವುದಕ್ಕೆ ರಾಹುಲ್ ದ್ರಾವಿಡವರ ಸಾಧನೆಯೇ ಸಾಕ್ಷಿ…T20 ವಿಶ್ವಕಪ್ ಗೆದ್ದ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರ ಕ್ರಿಕೆಟ್ ಜೀವನದಲ್ಲಿ ನಷ್ಟಗೊಂಡ ಮಣ್ಣಿನಿಂದಲೇ ಮತ್ತೆ ಎಲ್ಲವನ್ನೂ ಮರಳಿ ಈ ವಿಶ್ವಕಪ್ ಪಂದ್ಯಾಟ ಗಳಿಸಿಕೊಟ್ಟದ್ದು ವಿಶೇಷ
ನಿಮಗೆ ಚಕ್ ದೇ ಇಂಡಿಯಾ ಸಿನಿಮಾ ಕತೆ ಗೊತ್ತಿರಬಹುದು, ಮೊನ್ನೆ ವಿಶ್ವಕಪ್ ಗೆದ್ದ ಭಾರತದ ಕೋಚ್ ರಾಹುಲ್ ದ್ರಾವಿಡ್ ಅವರ ಕತೆಯೂ ಈ ಸಿನಿಮಾಕ್ಕೆ ಹೋಲಿಕೆ ಮಾಡಬಹುದೇನೋ..
ಅಂದು 2007 ರಲ್ಲಿ ವಿಶ್ವಕಪ್ ಪಂದ್ಯಾಟಕ್ಕಾಗಿ ವೆಸ್ಟ್ ಇಂಡೀಸ್ ಮಣ್ಣಿಗೆ ಭಾರತದ ಹೊರಟಾಗ ನಮ್ಮ ತಂಡ ಕೂಡ ಕಪ್ ಗೆಲ್ಲಬಲ್ಲ ಫೆವರೇಟ್ ತಂಡಗಳಲ್ಲಿ ಒಂದಾಗಿತ್ತು..
ಅತೀ ಹೆಚ್ಚು ಪಂದ್ಯಗಳಲ್ಲಿ ನಿರಂತರವಾಗಿ ಚೇಸ್ ಮಾಡಿ ಜಯಿಸಿದ ತಂಡ ಎಂಬ ದಾಖಲೆಯೂ ಭಾರತ ತಂಡದ ಬಳಿ ಇತ್ತು..
ಆ ತಂಡದಲ್ಲಿ ರಾಹುಲ್ ದ್ರಾವಿಡ್ ಟಾಪ್ ಮೂರು ಆಟಗಾರರಲ್ಲಿ ಒಬ್ಬರಾಗಿದ್ದರು, ಸ್ವತಃ ನಾಯಕರಾಗಿಯೂ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಕೂಡ ಹೆಗಲಲ್ಲಿ ಇತ್ತು, ಆದರೆ ಕೆರೇಬಿಯನ್ ಮಣ್ಣಿನಲ್ಲಿ ಗ್ರೂಪ್ ಹಂತದಲ್ಲೇ ದುರ್ಬಲ ಬಾಂಗ್ಲಾದೇಶ ವಿರುದ್ಧ ಅನಿರೀಕ್ಷಿತವಾಗಿ ಸೋತು ನಂತರ ಶ್ರೀಲಂಕಾ ಜೊತೆಗೆ ಸೋತು ಪಂದ್ಯಾಟ ಕೊನೆಗೊಳಿಸಿ ಗ್ರೂಪ್ ಹಂತದಿಂದಲೇ ಭಾರತ ತವರಿಗೆ ಮರಳಿದಾಗ ದ್ರಾವಿಡ್ ಅವರ ಮೇಲಿನ ಭರವಸೆಯೂ ಮರಳಿ ಪಾತಾಳಕ್ಕೆ ಮುಟ್ಟಿತ್ತು..
ಬಹುಶಃ ಸಚಿನ್ ತೆಂಡೂಲ್ಕರ್ ನಂತರದ ಸ್ಥಾನದಲ್ಲಿ ನಿಲ್ಲಬೇಕಿದ್ದ ರಾಹುಲ್ ದ್ರಾವಿಡ್ ಅವರಿಗೆ ಆ ಒಂದು ವಿಶ್ವಕಪ್ ನಂತರ ಆ ಮಟ್ಟದಲ್ಲಿ ನಿಲ್ಲಲು ಸಾಧ್ಯವಾಗಿರಲಿಲ್ಲ..
ಹದಿನೇಳು ವರುಷ ನಂತರ ಕೋಚ್ ಎಂಬ ಹೊಸ ಕ್ಯಾಪ್ ಧರಿಸಿ ಮತ್ತೆ ಅದೇ ವೆಸ್ಇಂಡೀಸ್ ಮಣ್ಣಿಗೆ ಹೊರಟಾಗ ರಾಹುಲ್ ದ್ರಾವಿಡ್ ಅವರ ಲಕ್ಷ್ಯ ಏನಾಗಿತ್ತು ಎಂಬುದು ಗೆದ್ದ ನಂತರ ಅವರು ತೋರಿಸಿದ ಅಪರೂಪದ ಭಾವೋದ್ರೇಕ ಕಂಡಾಗ ಅರ್ಥವಾಗಬಹುದು..
ಒಮ್ಮೆ ಎಲ್ಲವೂ ನಷ್ಟಗೊಂಡ ಮಣ್ಣಿನಲ್ಲೇ ಮತ್ತೆ ಸಾಧಿಸಲು ಕ್ರಿಕೆಟ್ ಜೀವನದಲ್ಲಿ ಕೊನೆಯ ಬಾರಿ ಹೋರಾಟಕ್ಕೆ ಇಳಿದವ ಗಳಿಸಿದ ಯಶಸ್ಸು ಆ ಕಣ್ಣಿನಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು..
ಒಂಥರಾ ರೋಚಕ ಕಾಲ್ಪನಿಕ ಸಿನಿಮಾ ಕತೆಗಳಿಗೂ ಸವಾಲು ಹಾಕುವಂತೆ ಮೈದಾನದಲ್ಲಿ ಮೇಳೈಸಿದ ದೃಶ್ಯ ವೈಭವಗಳ ನಡುವೆ ರಾಹುಲ್ ದ್ರಾವಿಡ್ ಎಂಬ ವ್ಯಕ್ತಿ ಶಾಂತವಾಗಿ ತಾನು ಇಟ್ಟ ಲಕ್ಷ್ಯವನ್ನು ಮುಟ್ಟಿಯೇ ಬಿಟ್ಟ..
ಒಂದೊಳ್ಳೆ ಅಧ್ಬುತ ಸಿನಿಮಾದ ಕ್ಲೈಮಾಕ್ಸ್ ನಲ್ಲಿ ಎಲ್ಲವನ್ನೂ ಸಾಧಿಸಿ ನಿಂತ ಹೀರೋನ ಹಾಗೆ…
ವರದಿ. ಮಂಜುನಾಥ್ ದೊಡ್ಡಮನಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030