ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆಯ ಪ್ರಯುಕ್ತ ಆಯೋಜನೆ
ನಿರಾಶ್ರಿತ ಪರಿಹಾರ ಕೇಂದ್ರದಲ್ಲಿ ಮನೋಚೈತನ್ಯ ಶಿಬಿರ
ಚಿತ್ರದುರ್ಗ ತಾಲ್ಲೂಕಿನ ಗೋನೂರು ಸಮೀಪದ ಹೋ.ಚಿ.ಬೋರಯ್ಯ ಬಡಾವಣೆಯ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಶುಕ್ರವಾರ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ವತಿಯಿಂದ ವಿಶ್ವ ಸ್ಕಿಜೋಫ್ರೇನಿಯ ದಿನಾಚರಣೆಯ ಪ್ರಯುಕ್ತ ಮನೋಚೈತನ್ಯ ಕಾರ್ಯಕ್ರಮ ಆಚರಿಸಲಾಯಿತು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಜಿ.ಓ.ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿವರ್ಷ ಮೇ 24ರಂದು ವಿಶ್ವದಾದ್ಯಂತ ಸ್ಕಿಜೋಫ್ರೇನಿಯಾ ಕಾಯಿಲೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಿಶ್ವದಾದ್ಯಂತ ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆಯನ್ನು ಆಚರಿಸಲಾಗುತ್ತದೆ, ಸ್ಕಿಜೋಫ್ರೇನಿಯಾ ಎನ್ನುವುದು ತೀವ್ರತರವಾದ ಮಾನಸಿಕ ಕಾಯಿಲೆಯಾಗಿದ್ದು ಈ ರೀತಿಯ ಕಾಯಿಲೆ ಇರುವವರನ್ನು ಮನೆಯಲ್ಲಿ ಅಥವಾ ಸಮುದಾಯದಲ್ಲಿ ಕಳಂಕ ಮತ್ತು ತಾರತಮ್ಯದಿಂದ ಬಂಧಿಸುವುದು ಹಗ್ಗದಿಂದ ಕಟ್ಟಿ ಹಾಕುವುದು ಮತ್ತು ಶಿಕ್ಷೆ ಕೊಡುವುದನ್ನು ಮಾಡುವುದು ಸರಿಯಲ್ಲ, ಇವರು ಕೂಡ ನಮ್ಮ ನಿಮ್ಮ ಹಾಗೆ ಮನುಷ್ಯರಾಗಿದ್ದು, ಸ್ಕಿಜೋಫ್ರೇನಿಯಾ ಕಾಯಿಲೆಯಿಂದ ಬಳಲುವವರಿಗೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ತಾಲೂಕು ಆಸ್ಪತ್ರೆಗಳಲ್ಲಿ ಜಿಲ್ಲಾ ಆಸ್ಪತ್ರೆಯ ಮನೋವೈದ್ಯರಿಂದ ಚಿಕಿತ್ಸೆ ದೊರೆಯುತ್ತದೆ ಚಿಕಿತ್ಸೆ ಪಡೆದುಕೊಂಡು ಸಂಪೂರ್ಣವಾಗಿ ಗುಣಮುಖರಾಗಬೇಕು ಎಂದರು.
ಸ್ಕಿಜೋಫ್ರೇನಿಯಾ ಕಾಯಿಲೆಯೂ ಪ್ರತಿ 100ರಲ್ಲಿ ಒಬ್ಬರಿಗೆ ಬರುವಂತಹ ತೀವ್ರತರವಾದ ಮಾನಸಿಕ ಕಾಯಿಲೆಯಾಗಿದ್ದು, ಈ ಕಾಯಿಲೆ ಇರುವ ವ್ಯಕ್ತಿಯು ನೈಜ ಜಗತ್ತಿನ ಜೊತೆ ಸಂಪರ್ಕದಲ್ಲಿ ಇರುವುದಿಲ್ಲ. ಈ ವ್ಯಕ್ತಿಗೆ ಭ್ರಮೆ ಅಥವಾ ಭ್ರಾಂತಿಗಳು ಕಂಡುಬರುತ್ತವೆ. ಸಕಾಲದಲ್ಲಿ ತಾರತಮ್ಯ ಮಾಡದೆ ಚಿಕಿತ್ಸೆ ಕೊಟ್ಟು ಕೊಡಿಸುವುದರ ಮೂಲಕ ಸಂಪೂರ್ಣವಾಗಿ ಕಾಯಿಲೆಯಿಂದ ಗುಣಮುಖರಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಕ್ಲಿನಿಕಲ್ ಸೈಕಾಲಜಿಸ್ಟ್ ಟಿ.ಶ್ರಿಧರ್ ಮಾತನಾಡಿ, ಸ್ಕಿಜೋಫ್ರೇನಿಯಾ ಕಾಯಿಲೆ ಇರುವ ವ್ಯಕ್ತಿಗೆ ತನ್ನ ಕಾಯಿಲೆ ಬಗ್ಗೆ ಅರಿವು ಇರುವುದಿಲ್ಲ. ವಿಚಿತ್ರವಾಗಿ ವರ್ತಿಸುತ್ತಾರೆ ವಿಚಿತ್ರವಾಗಿ ಮಾತನಾಡುತ್ತಾರೆ ವೇಷ ಭೂಷಣ ವಿಚಿತ್ರವಾಗಿರುತ್ತದೆ ಯಾರಿಗೂ ಕಾಣದ ದೃಶ್ಯಗಳು ಕಾಣಿಸುವುದು. ಎಲ್ಲರೂ ಮತ್ತು ಎಲ್ಲದರ ಬಗ್ಗೆ ಅನುಮಾನ ಪಡುವುದು ಸಂಬಂಧದಲ್ಲಿ ಸಂಶಯಪಡುವುದು. ದೈನಂದಿನ ಕಾರ್ಯಗಳಲ್ಲಿ ಮತ್ತು ಜವಾಬ್ದಾರಿಗಳಲ್ಲಿ ವ್ಯತ್ಯಾಸವಾಗುವುದು. ವಿಚಿತ್ರವಾದ ಮಾತು ವಿಚಿತ್ರ ವರ್ತನೆ ಈ ರೀತಿಯ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಮನೋವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಯನ್ನು ಪಡೆದು ಸಂಪೂರ್ಣವಾಗಿ ಗುಣಮುಖರಾಗಬೇಕೆಂದು ಕೋರಿದರು.
ಬಸವೇಶ್ವರ ವೈದ್ಯಕೀಯ ಕಾಲೇಜಿನ ಮನೋವೈದ್ಯಕೀಯ ಸ್ನಾತಕೋತ್ತರ ಪಿಜಿ ವೈದ್ಯಾಧಿಕಾರಿ ಡಾ.ಅರವಿಂದ್ ಸೇಲ್ವ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿನ ರೋಗಿಗಳನ್ನು ಮಾನಸಿಕ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ಮತ್ತು ಸಮಲೋಚನೆ ನೀಡಿದರು.
ಕಾರ್ಯಕ್ರಮದಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕರಾದ ಮಹದೇವಯ್ಯ ಮತ್ತು ಶುಶ್ರೂಷಾಧಿಕಾರಿಗಳು ಹಾಗೂ ಕೇಂದ್ರದ ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ಡಿಎಲ್ಒ ಕಚೇರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೈ.ತಿಪ್ಪೇಶ್ ಇದ್ದರು…
ವರದಿ. ಪ್ರದೀಪ್ ಚಿತ್ರದುರ್ಗ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030