ಬಳ್ಳಾರಿಯಲ್ಲಿ ಪೊಲೀಸ್ ವಾರ್ಷಿಕ ಕ್ರೀಡಾಕೂಟ
ಕ್ರೀಡಾಕೌಶಲ್ಯ ಪ್ರದರ್ಶನಕ್ಕೆ ಒಳ್ಳೆಯ ಅವಕಾಶ:ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ
ಸದಾ ಒತ್ತಡದಲ್ಲಿ ಹಗಲು-ರಾತ್ರಿಯೆನ್ನದೇ ಕರ್ತವ್ಯದಲ್ಲಿ ನಿರತರಾಗಿರುವ ಪೊಲೀಸರಿಗೆ ತಮ್ಮಲ್ಲಿ ಅಡಗಿರುವ ಕ್ರೀಡಾಕೌಶಲ್ಯವನ್ನು ಪ್ರದರ್ಶಿಸಲು ಮತ್ತು ಒತ್ತಡದಿಂದ ಹೊರಬರಲು ಒಳ್ಳೆಯ ಅವಕಾಶ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ತಿಳಿಸಿದರು.
ಬಳ್ಳಾರಿ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬರಲ್ಲಿಯೂ ಶಾಲಾ ಹಂತದಿಂದ ವಿವಿಧ ಕ್ರೀಡೆಗಳಲ್ಲಿ ಕೌಶಲ್ಯ ಬೆಳೆಸಿಕೊಂಡಿರುತ್ತಾರೆ;ದೊಡ್ಡವರಾದ ನಂತರ ಕೆಲಸದ ಒತ್ತಡ ಹಾಗೂ ಇನ್ನೀತರ ಒತ್ತಡಗಳಿಂದ ಕ್ರೀಡೆಗಳ ಕಡೆ ಗಮನಹರಿಸಲು ಸಾಧ್ಯವಾಗುವುದಿಲ್ಲ; ಈ ರೀತಿಯ ವಾರ್ಷಿಕ ಕ್ರೀಡಾಕೂಟಗಳು ಕ್ರೀಡಾ ಕೌಶಲ್ಯವನ್ನು ಪ್ರದರ್ಶಿಸಲು ಮತ್ತು ಕೌಶಲ್ಯವನ್ನು ಕಾಪಾಡಿಕೊಂಡು ಹೋಗಲು ಒಳ್ಳೆಯ ವೇದಿಕೆ ಒದಗಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಕ್ರೀಡಾಕೂಟದಲ್ಲಿ ಪಾಲ್ಗೊಂಡ ಎಲ್ಲರೂ ಕ್ರೀಡಾಮನೋಭಾವನೆಯಿಂದ ಆಡುವಂತೆ ಸಲಹೆ ನೀಡಿದ ಅವರು ಗೆಲುವಿಗಿಂತ ಸೋಲಿನಲ್ಲಿಯೇ ಲಾಭ ಹೆಚ್ಚು;ಸೋಲಿನ ಸಂದರ್ಭದಲ್ಲಿನ ಲೋಪದೋಷಗಳನ್ನು ಅರಿತುಕೊಂಡು ಗುರಿಮುಟ್ಟಲು ಸಾಧ್ಯ ಎಂಬುದನ್ನು ಸಹ ನಾವು ಅರಿತುಕೊಳ್ಳಬೇಕು ಎಂದರು.
ಇದೊಂದು ಒಳ್ಳೆಯ ಕಾರ್ಯಕ್ರಮ ಪ್ರತಿ ವರ್ಷ ಇದೇ ರೀತಿ ಆಯೋಜನೆಯಾಗಲಿ ಎಂದು ಹೇಳಿದ ಡಿಸಿ ಮಾಲಪಾಟಿ ಅವರು ಪೊಲೀಸ್ ಸಿಬ್ಬಂದಿ ಚುನಾವಣಾ ಕಾರ್ಯ,ಬಂದೋಬಸ್ತ್ನಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರು.
ಸರಕಾರ ಜಾರಿಗೊಳಿಸಿದ ನೈಟ್ಕಫ್ರ್ಯೂ ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು;ಜನರು ಕೂಡ ಜಿಲ್ಲಾಡಳಿತದೊಂದಿಗೆ ಅಗತ್ಯ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಮಾತನಾಡಿ, ಸದಾ ಒತ್ತಡದ ಕೆಲಸದಲ್ಲಿರುವ ಪೊಲೀಸ್ ಸಿಬ್ಬಂದಿಗಳ ಆರೋಗ್ಯ ರಕ್ಷಣೆಗಾಗಿ ಕ್ರೀಡಾಕೂಟ ಆಯೋಜಿಸಲಾಗಿದೆ. ಕ್ರೀಡೆ ಆಯೋಜನೆಯಿಂದ ಸಿಬ್ಬಂದಿ ಮತ್ತು ಅಧಿಕಾರಿಗಳ ಉತ್ತಮ ಬಾಂಧವ್ಯ ಬೆಳೆಯಲಿದೆ ಎಂದರು.
ಕ್ರೀಡಾಳುಗಳು ಯಾವ ಕ್ರೀಡೆಯಲ್ಲಿ ನೈಪುಣ್ಯತೆ ಹೊಂದಿರುತ್ತಾರೆ;ಆ ಕ್ರೀಡೆಯಲ್ಲಿ ಭಾಗವಹಿಸುವುದಕ್ಕೆ ಅವಕಾಶ ನೀಡಲಾಗುವುದು. ಎರಡು ದಿನಗಳ ಕಾಲ ಕ್ರೀಡಾಕೂಟ ನಡೆಯಲಿದೆ ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ, ಡಿವೈಎಸ್ಪಿ ಸರ್ದಾರ್ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
ನಂತರ ವಿವಿಧ ಕ್ರೀಡಾ ಸ್ಪರ್ಧೆಗಳು ಜರುಗಿದವು. ಈ ಕ್ರೀಡಾಕೂಟದ ಸಮಾರೋಪ ಸಮಾರಂಭ ಬುಧವಾರ ಸಂಜೆ ಜರುಗಲಿದೆ…
ವರದಿ. ವಿರೇಶ್, ಹಳೇಕೋಟೆ, ಬಳ್ಳಾರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030