ಒಬ್ಬ small town boy ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 8 ಸಾವಿರ ರನ್ ಹೊಡೆಯುವುದು ತಮಾಷೆ ಮಾತಲ್ಲ..!
10 ವರ್ಷ ವಯಸ್ಸಿನ ಒಬ್ಬ ಹುಡುಗ ಅವತ್ತು ಸುರತ್ಕಲ್’ನಿಂದ ಮಂಗಳೂರಿನ ನೆಹರೂ ಮೈದಾನಕ್ಕೆ ತಂದೆಯ ಜೊತೆ ಬಂದಿದ್ದ.
ಅಲ್ಲೊಬ್ಬರು ಕ್ರಿಕೆಟ್ ಕೋಚ್.. ಸ್ಯಾಮುಯೆಲ್ ಜಯರಾಜ್. ಕರಾವಳಿ ಹುಡುಗರ ಪಾಲಿನ ದ್ರೋಣಾಚಾರ್ಯ..
ಜಯರಾಜ್ ಅವರನ್ನು ಭೇಟಿಯಾದ ಆ ತಂದೆ ಹೇಳಿದ್ದು ಒಂದೇ ಮಾತು.. ‘’ಸರ್, ನನ್ನ ಮಗ ಕ್ರಿಕೆಟ್ ಆಡ್ಬೇಕು’’.
‘’ನಾಳೆ ಸಂಜೆ ನಾಲ್ಕು ಗಂಟೆಗೆ ಕರೆದುಕೊಂಡು ಬನ್ನಿ’’. ಅಷ್ಟು ಹೇಳಿ ಹೊರಟು ಬಿಟ್ಟರು ಸ್ಯಾಮುಯೆಲ್ ಜಯರಾಜ್.
ಮರುದಿನ ನೆಹರೂ ಮೈದಾನಕ್ಕೆ ಮಧ್ಯಾಹ್ನ ಎರಡೂವರೆ ಗಂಟೆಗೆ ಹೋದವರಿಗೆ ಎದುರಲ್ಲಿ ಕಂಡವನು ರಾಹುಲ್.. ಕೆ.ಎಲ್ ರಾಹುಲ್.
‘ನಾಲ್ಕು ಗಂಟೆಗೆ ಬಾ’ ಎಂದಿದ್ದರು. ಹುಡುಗ ಎರಡೂವರೆ ಗಂಟೆಗೇ ಬಂದು ಕುಳಿತಿದ್ದ. ಅವತ್ತೇ ಜಯರಾಜ್ ನಿರ್ಧಾರ ಮಾಡಿ ಬಿಟ್ಟರೇನೋ.. ‘ನನ್ನ ಪಾಲಿನ ಅರ್ಜುನ ಇವನೇ’ ಎಂದು.
ಅಂದಿನ ಆ ಹುಡುಗ ಇಂದು ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 8 ಸಾವಿರ ರನ್ ಹೊಡೆದಿದ್ದಾನೆ. ಸಣ್ಣ ಊರಿನಿಂದ ಬಂದವನು.. ಸಣ್ಣ ಸಾಧನೆಯಲ್ಲ ಇದು.
ಕೆ.ಎಲ್ ರಾಹುಲ್ ತುಂಬಾ ಕಷ್ಟ ಪಟ್ಟು ಬಂದ ಹುಡುಗ. ಕ್ರಿಕೆಟ್ ಕ್ಯಾಂಪ್’ಗೆ ಎಲ್ಲರಿಗಿಂತ ಮೊದಲು ಬಂದು ಕ್ರಿಕೆಟ್ ಪಿಚ್ ಗುಡಿಸುತ್ತಿದ್ದ.. ಮ್ಯಾಟ್ ರೆಡಿ ಮಾಡಿ ಮೊಳೆಯಿಂದ ಹೊಡೆದು ಆಟಕ್ಕೆ ಸಿದ್ಧ ಪಡಿಸುತ್ತಿದ್ದ..
ಆಟವನ್ನು ಅಷ್ಟು ಪ್ರೀತಿಸಿದವನು ಒಮ್ಮೆ ಕ್ರಿಕೆಟ್ ಸಹವಾಸವೇ ಸಾಕು ಎಂದು ಬಿಟ್ಟಿದ್ದ.
2010 ಇರಬೇಕು. ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಅಂಡರ್-19 ತಂಡವನ್ನು ಆಯ್ಕೆ ಮಾಡಲಾಗಿತ್ತು. ಕರ್ನಾಟಕ ಪರ ಅಂಡರ್-19 ಟೂರ್ನಿಗಳಲ್ಲಿ ರನ್ ಹೊಳೆಯನ್ನೇ ಹರಿಸಿದ್ದವನು ಸಹಜವಾಗಿಯೇ ಭಾರತ ತಂಡದ ಮೇಲೆ ಕಣ್ಣಿಟ್ಟಿದ್ದ ರಾಹುಲ್.
ಆದರೆ ಕ್ರಿಕೆಟ್ ರಾಜಕೀಯ.. ತಂಡದ ಆಯ್ಕೆ ನಡೆದಾಗ ಅಲ್ಲಿ ರಾಹುಲ್ ಬದಲು ಕರ್ನಾಟಕದ ಮತ್ತೊಬ್ಬನ ಹೆಸರಿತ್ತು. ಮಯಾಂಕ್ ಅಗರ್ವಾಲ್ ಜೊತೆ ಅವನು ಆಸ್ಟ್ರೇಲಿಯಾ ವಿಮಾನ ಹತ್ತಿದ್ದ.
ನಿಂತ ನೆಲವೇ ಕುಸಿದಂತಾಯಿತು ರಾಹುಲ್’ಗೆ. ಹತಾಶನಾಗಿ ಬಿಟ್ಟ.. ಇನ್ನೆಂದೂ ಕ್ರಿಕೆಟ್ ಆಡುವುದಿಲ್ಲ ಎಂದು ಬಿಟ್ಟ. 10-15 ದಿನಗಳ ಕಾಲ ಬ್ಯಾಟ್ ಮುಟ್ಟಲೇ ಇಲ್ಲ. ಬಹುಶಃ ಕ್ರಿಕೆಟ್ ಬಗ್ಗೆ ರಾಹುಲ್’ಗೆ ಬೇಸರ ಮೂಡಿದ್ದು ಅದೇ ಮೊದಲು ಮತ್ತು ಅದೇ ಕೊನೆ.
ಕ್ರಿಕೆಟ್ ಬೇಡವೆಂದವನನ್ನು ಮರಳಿ ಮೈದಾನಕ್ಕೆ ಕರೆ ತಂದವರು ಗುರು ಸ್ಯಾಮುಯೆಲ್ ಜಯರಾಜ್. ಅರ್ಜುನನಿಗೆ ಗೀತೋಪದೇಶ ಮಾಡಿದ ಕೃಷ್ಣನಂತೆ ಶಿಷ್ಯನಿಗೆ ಪಾಠ ಮಾಡಿ ಮತ್ತೆ ಬ್ಯಾಟ್ ಹಿಡಿಯುವಂತೆ ಮಾಡಿದರು ಆ ದ್ರೋಣಾಚಾರ್ಯ.
ಜಯರಾಜ್ ಅವರ ಗರಡಿಯಿಂದ ಬಂದ ರಾಹುಲ್ ಇವತ್ತಿಗೆ ಕ್ರಿಕೆಟ್ ಜಗತ್ತಿನ most elegant, most stylish, talented ಕ್ರಿಕೆಟರ್. ಅವನು ಬ್ರಯಾನ್ ಲಾರಾ ಅವರ ಅಚ್ಚುಮೆಚ್ಚಿನ ಕ್ರಿಕೆಟಿಗ.. ಡೇಲ್ ಸ್ಟೇಯ್ನ್ ಅವರ ನೆಚ್ಚಿನ ಆಟಗಾರ. ಒಬ್ಬ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್’ಮನ್, ಇನ್ನೊಬ್ಬ ಸಾರ್ವಕಾಲಿಕ ಶ್ರೇಷ್ಠ ಫಾಸ್ಟ್ ಬೌಲರ್.. ಇಷ್ಟು ಸಾಕು.. ರಾಹುಲ್’ಗೆ ಬೇರೆಯವರ ಸರ್ಟಿಫಿಕೇಟ್ ಬೇಕಿಲ್ಲ.
ಪ್ರಿಯ ರಾಹುಲ್..
ನಿನ್ನನ್ನು ಟೀಕಿಸುವವರು, ಹೀಯಾಳಿಸುವವರು, ಮೂದಲಿಸುವವರು ತಮ್ಮ ಕೆಲಸ ಮಾಡುತ್ತಲೇ ಇರಲಿ..
ನೀನೆಂದಿಗೂ ನಮ್ಮ ಹೆಮ್ಮೆ…
ವರದಿ. ನಾಗರಾಜ್, ವಿ, ರಾಯಚೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030