ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿ ಕೊರಕದ ನಿರ್ವಹಣೆ ಕುರಿತು ತರಬೇತಿ
ಬಳ್ಳಾರಿ:ತಾಲ್ಲೂಕಿನ ಹಂದಿಹಾಳು ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿ ಕೊರಕದ ನಿರ್ವಹಣೆ ಕುರಿತು ಮಂಗಳವಾರ ರೈತರಿಗೆ ತರಬೇತಿ ನೀಡಲಾಯಿತು.
ಉಪ ಕೃಷಿ ನಿರ್ದೇಶಕ ಕೆಂಗೇಗೌಡ ಅವರು ಮಾತನಾಡಿ, ಪ್ರಸ್ತುತದಲ್ಲಿ ಮಣ್ಣು ಫಲವತ್ತತೆ ಕಳೆದುಕೊಳ್ಳುತ್ತಿದ್ದು, ಸಾವಯವ ಇಂಗಾಲದ ಅಂಶ ಕೂಡ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಹಾಗಾಗಿ ಮಣ್ಣು ಪರೀಕ್ಷೆಯನ್ನು ರೈತರು ತಪ್ಪದೇ ಮಾಡಿಸಬೇಕು ಹಾಗೂ ಮಣ್ಣಿನ ಗುಣಧರ್ಮದ ಆಧಾರದ ಮೇರೆಗೆ ರಸಗೊಬ್ಬರಗಳನ್ನು ಬಳಸಬೇಕು ಎಂದು ಹೇಳಿದರು.
ಕೃಷಿ ಭೂಮಿಯ ಸ್ಥಿರತೆ ಕಾಪಾಡಲು ರೈತರು ಹಸಿರೆಲೆ ಗೊಬ್ಬರ ಸಸ್ಯಗಳಂತಹ ಸೆಣಬು, ಪಿಳ್ಳೆಪಿಸುರು ಕಡೆ ರೈತರು ಮನಸ್ಸು ಮಾಡಬೇಕು ಹಾಗೂ ಕೃಷಿ ಇಲಾಖೆ ಯೋಜನೆಗಳಾದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ, ಪಿಎಂಎಫ್ಎಮ್ಇ ಹಾಗೂ ಕೃಷಿ ಭಾಗ್ಯ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ರಾಯಚೂರು ಕೃಷಿ ವಿಶ್ವವಿದ್ಯಾಲಯದ ಅನುವಂಶೀಯ ಮತ್ತು ತಳಿ ಅಭಿವೃದ್ಧಿಯ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ.ಜಯಪ್ರಕಾಶ ಎಂ ನಿಡಗುಂದಿ ಅವರು ಮಾತನಾಡಿ, ಹತ್ತಿ ಬೆಳೆಯಲ್ಲಿ ಸಾಲುಗಳ ನಡುವೆ ಅಂತರ ಕಾಪಾಡುವುದು ಬಹು ಮುಖ್ಯವಾಗಿದ್ದು, ರೈತರು ಈ ಅಂಶವನ್ನು ನಿರ್ಲಕ್ಷಿಸಬಾರದು ಎಂದು ತಿಳಿಸಿದರು.
ರೈತರು ಎಕರೆಗೆ 2 ರಿಂದ 3 ಪ್ಯಾಕೆಟ್ ಹತ್ತಿ ಬೀಜವನ್ನು ಉಪಯೋಗಿಸದೆ, ಕೇವಲ ಒಂದು ಪ್ಯಾಕೆಟ್ ಬೀಜವನ್ನು ಉಪಯೋಗಿಸಿದ್ದಲ್ಲಿ ಗಿಡದಿಂದ ಗಿಡಕ್ಕೆ ಅಂತರ ಕಾಪಾಡುವುದರಿಂದ ಇಳುವರಿ ಹೆಚ್ಚಿಸಬಹುದು ಎಂದು ತಿಳಿಸಿದರು.
ಬಿಟಿ ಹತ್ತಿ ಬೆಳೆಯಲು ಅನುಮತಿ ನೀಡಿದಾಗಿನಿಂದಲೂ ಇಲ್ಲಿಯವರೆಗೆ ಬಿಟಿರಹಿತ ಹತ್ತಿ (ರೆಫ್ಯೂಜಿ)ಯನ್ನು ಬೆಳೆಯದಿರುವುದು ಗುಲಾಬಿ ಕಾಯಿ ಕೊರಕದ ಉಲ್ಬಣಕ್ಕೆ ಕಾರಣವಾಗಿದೆ. ಕೀಟನಾಶಕಗಳನ್ನು ಶಿಫಾರಸ್ಸು ಮಾಡಿರುವುದಕ್ಕಿಂತ ಹೆಚ್ಚಿನ ಬಳಕೆ ಮಾಡಿರುವುದರಿಂದ ಈ ಕೀಟವು ಹಲವು ಕೀಟನಾಶಕಗಳಿಗೆ ನಿರೋಧಕಶಕ್ತಿಯನ್ನು ಬೆಳೆಸಿಕೊಂಡಿದೆ ಎಂದು ವಿವರಿಸಿದರು.
ಗುಲಾಬಿ ಕಾಯಿ ಕೊರಕ ಕಂಡುಬಂದಲ್ಲಿ, 3 ಮಿ.ಲೀ. ಬೇವಿನ ಮೂಲದ ಕೀಟನಾಶಕ ಅಥವಾ 1 ಗ್ರಾಂ ಥಯೋಡಿಕಾರ್ಬ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಕೀಟನಾಶಕವನ್ನು ಸಿಂಪಡಿಸಬೇಕು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬಸವರಾಜ್ ಸಿಂಧಿಗೇರಿ ಅವರು, ಕೃಷಿ ಇಲಾಖೆಯಡಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಣೆ ನೀಡಿದರು.
ಈ ವೇಳೆ ಆತ್ಮ ಯೋಜನೆಯ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ವಾಣಿ ಕೋರಪ್ಪಳ, ಗ್ರಾಮ ಪಂಚಾಯಿತಿ ಅಧ್ಯಕ್ಷ ಯು.ಗಣೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಪವಿತ್ರ, ಲಿಂಗಪ್ಪ, ರೆಹಮತ್ ಬೀ ಸೇರಿದಂತೆ ಗ್ರಾಮದ ರೈತರು, ಸಾರ್ವಜನಿಕರು ಹಾಗೂ ಇತರರು ಹಾಜರಿದ್ದರು…
ವರದಿ. ಉಜ್ಜಿನಯ್ಯ, ಸಂಡೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030