ಒಳ ಮೀಸಲಾತಿ ನೀಡದಿದ್ದಲ್ಲಿ ಬೀದಿಗಿಳಿದು ಹೋರಾಟ:
ಮಾಜಿ ಸಚಿವ ಹೆಚ್.ಆಂಜನೇಯ
ಚಿತ್ರದುರ್ಗಹೊಯ್ಸಳ:
ನಾಯಕನಹಟ್ಟಿ:
ಹಲವು ದಶಕಗಳಿಂದಲೂ ರಾಜ್ಯದಲ್ಲಿ ಮೀಸಲಾತಿ ಸೌಲಭ್ಯದಿಂದ ವಂಚಿತ ಸಮುದಾಯಕ್ಕೆ ಸರ್ಕಾರದ 6ನೇ ಗ್ಯಾರಂಟಿಯಾಗಿ ಒಳಮೀಸಲಾತಿ ಜಾರಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಶೀಘ್ರ ದಿಟ್ಟ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸದಾ ಶೋಷಿತ ಸಮುದಾಯದ ಪರ ನಿಲುವು ಹೊಂದಿರುವ ಸಿಎಂ ಸಿದ್ದರಾಮಯ್ಯ ನಡೆ ನೊಂದ ಜನರ ಪ್ರಗತಿಗೆ ವರವಾಗಿದೆ ಎಂದರು.
ರಾಜ್ಯದಲ್ಲಿ ಒಳಮೀಸಲಾತಿ ಕೂಗು ನಾಲ್ಕು ದಶಕಗಳಿಂದ ಕೇಳಿಬರುತ್ತಿದೆ. ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಒಳಮೀಸಲಾತಿ ಜಾರಿಗೆ ಸಂಬಂದಿಸಿದಂತೆ ನ್ಯಾ.ಎ.ಜೆ.ಸದಾಶಿವ ಅವರನ್ನೊಳಗೊಂಡ ಸಮಿತಿಯನ್ನು ರಚಿಸಿದರು. 2012 ರಲ್ಲಿ ಆಯೋಗವು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ರಾಜ್ಯ ಸರ್ಕಾರ ಒಳಮೀಸಲಾತಿಗೆ ಶಿಫಾರಸು ಮಾಡಿತು. ಆದರೆ, ಅದಕ್ಕೆ ಸಂವಿದಾನದಲ್ಲಿ ತಿದ್ದುಪಡಿಯಾಗಬೇಕಿತ್ತು. ಅದಕ್ಕಾಗಿ ಒಳಮೀಸಲಾತಿ ನನೆಗುದಿಗೆ ಬಿದ್ದಿತ್ತು ಎಂದು ತಿಳಿಸಿದರು.
ದೇಶದ ಹಲವು ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣವು ಭಿನ್ನವಾಗಿದ್ದು, ಒಳಮೀಸಲಾತಿ ಜಾರಿ ಕಾರ್ಯವು ತುಂಬಾ ಸಂಕೀರ್ಣದಿಂದ ಕೂಡಿತ್ತು. ಆದರೆ, ರಾಜ್ಯ ಸರ್ಕಾರಗಳೇ ಒಳಮೀಸಲಾರಿ ಜಾರಿ ಮಾಡುವ ಹಕ್ಕು ಹೊಂದಿದೆ ಎಂಬ ಸುಪ್ರೀಂಕೋರ್ಟ್ ತೀರ್ಪು ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ ಎಂದರು.
ಸುಪ್ರೀಂ ತೀರ್ಪು ಸ್ವಾಗತಿಸಿರುವ ಸಿದ್ದರಾಮಯ್ಯ, ಒಳಮೀಸಲಾತಿ ಜಾರಿ ವಿಷಯದಲ್ಲಿ ಕೆಲ ಕಾಣದ ಶಕ್ತಿಗಳು ಷಡ್ಯಂತ್ರ ನಡೆಸುತ್ತಿವೆ. ಇದೆಲ್ಲವನ್ನೂ ಮೆಟ್ಟಿ ನಿಂತು ರಾಜ್ಯ ಸರ್ಕಾರ ಜಾರಿಗೊಳಿಸುವ ವಿಶ್ವಾಸ ಇದೆ. ಒಂದೊಮ್ಮೆ ಒಳ ಮೀಸಲಾತಿ ನೀಡದಿದ್ದಲ್ಲಿ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸುತ್ತೇನೆ. ಈ ವಿಷಯದಲ್ಲಿ ಯಾವುದೇ ರೀತಿ ರಾಜಿ ಇಲ್ಲ ಎಂದು ಆಂಜನೇಯ ಹೇಳಿದರು.
ಸರಕಾರ ಜಾರಿ ಮಾಡಲು ಸಂಕಲ್ಪ ಹೊಂದಿದ್ದು, ಈಗಾಗಲೇ ನಾವೆಲ್ಲರೂ ಭೇಟಿ ನೀಡಿದ್ದ ಸಂದರ್ಭ ಒಳಮೀಸಲಾತಿ ಜಾರಿ ತುರ್ತು ಅಗತ್ಯ ಎಂಬ ಮಾತನ್ನು ಹೇಳಿದ್ದಾರೆ ಎಂದು ತಿಳಿಸಿದರು.
ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ದೇಶಾದ್ಯಂತ ಜಾತಿಗಣತಿ ಅಗಬೇಕೆಂದು ಒತ್ತಾಯಿಸುವ ಮೂಲಕ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರಿ ಸೌಲಭ್ಯ ಸಮನವಾಗಿ ಹಂಚಿಕೆ, ಒಳ ಮೀಸಲು ಜಾರಿ ಸುಲಭ ಸಾಧ್ಯ ಎಂಬ ದೂರದೃಷ್ಟಿ ಹೊಂದಿದ್ದಾರೆ. ಅದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲೂ ಒಳಮೀಸಲಾತಿ ಜಾರಿ ಮಾಡುತ್ತೇವೆ ಎಂದು ವಾಗ್ದಾನ ಮಾಡಿತ್ತು. ಅದರಂತೆ ಇಂತಹ ಐತಿಹಾಸಿಕ ತೀರ್ಮಾನ ಕೈಗೊಳ್ಳಲು ಸಿದ್ದರಾಮಯ್ಯ ಉತ್ಸುಕರಾಗಿದ್ದಾರೆ. ಆದರೆ, ಈ ವಿಷಯದಲ್ಲಿ ಸಣ್ಣ ಲೋಪ, ಅಡ್ಡಿಯಾಗದ ರೀತಿ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ ಎಂದರು. ಪಪಂ ಅಧ್ಯಕ್ಷೆ ಮಂಜುಳಾ ಶ್ರೀಕಾಂತ್, ಸದಸ್ಯ ಜೆ.ಆರ್.ರವಿಕುಮಾರ್ ಇದ್ದರು..
ವರದಿ ಮ್ಯಾಗೇರಿ ಸಂತೋಷ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030