ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಶನಿವಾರ ಹರಿಯಾಣದ ಪಿಂಜೋರ್ ನಲ್ಲಿರುವ ಹಿಂದೂಸ್ತಾನ್ ಮಶೀನ್ ಅಂಡ್ ಟೂಲ್ಸ್ – HMT ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ನವದೆಹಲಿಯಿಂದ ಮಧ್ಯಾಹ್ನದ ನಂತರ ಕಾರ್ಖಾನೆಗೆ ಭೇಟಿ ನೀಡಿದ ಸಚಿವರು, ಇಡೀ ಕಾರ್ಖಾನೆಯನ್ನು ಒಂದು ಸುತ್ತು ಹಾಕಿ ಉತ್ಪಾದನಾ ಚಟುವಟಿಕೆ ವೀಕ್ಷಿಸಿದರು ಹಾಗೂ ಯಂತ್ರಗಳ ಕಾರ್ಯಾಚರಣೆ ವೇಳೆಯಲ್ಲೇ ಉತ್ಪಾದನೆ ಕ್ಷಮತೆಯನ್ನು ಖುದ್ದು ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು.ಕಾರ್ಖಾನೆ ವೀಕ್ಷಣೆ ನಂತರ ಉನ್ನತ ಅಧಿಕಾರಿಗಳ ಸಭೆ ನಡೆಸಿ ಸಮಗ್ರ ಮಾಹಿತಿ ಪಡೆದುಕೊಂಡ ಕುಮಾರಸ್ವಾಮಿ, ಕಾರ್ಖಾನೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಕಾರ್ಖಾನೆ ಹೊಂದಿರುವ ಆಸ್ತಿಗಳು, ಆಸ್ತಿಗಳಿಗೆ ಸಂಬಂಧಪಟ್ಟ ಕೋರ್ಟ್ ವ್ಯಾಜ್ಯಗಳು, ಉದ್ಯೋಗಿಗಳ ಬಿಕ್ಕಟ್ಟುಗಳು ಇತ್ಯಾದಿ ಅಂಶಗಳ ಬಗ್ಗೆ ಸಚಿವರಿಗೆ ಅಧಿಕಾರಿಗಳು ಮಾಹಿತಿ ನೀಡಿದರು. ಕಾರ್ಖಾನೆಯ ಸದ್ಯದ ಪರಿಸ್ಥಿತಿಯ ಬಗ್ಗೆ ಸಚಿವರ ಕಳವಳ ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.ಕಾರ್ಖಾನೆಯ ವಹಿವಾಟು, ಲಾಭ, ಸಾಲ, ಬಾಕಿ ಸೇರಿದಂತೆ ಹಣಕಾಸು ಸ್ಥಿತಿಗತಿಗಳ ಬಗ್ಗೆ ಅಂಕಿ ಅಂಶಗಳನ್ನು ಪಡೆದುಕೊಂಡ ಸಚಿವರು, ಕಾರ್ಖಾನೆಯ ನೌಕರರ ಜತೆ ಮಾತುಕತೆ, ಕಾರ್ಮಿಕರ ಯೂನಿಯನ್ ಮುಖಂಡರ ಜತೆ ಚರ್ಚೆ ನಡೆಸಿದರು. ಸಾರ್ವಜನಿಕ ಸ್ವಾಮ್ಯದ ಕಾರ್ಖಾನೆಯನ್ನು ಉಳಿಸಿ ಬೆಳೆಸುವ ಹೊಣೆ ಎಲ್ಲರದ್ದು. ಎಲ್ಲಾರೂ ಬದ್ಧತೆ, ಕ್ಷಮತೆಯಿಂದ ಕೆಲಸ ಮಾಡಬೇಕು ಎಂದು ಅಧಿಕಾರಿಗಳು, ಕಾರ್ಮಿಕರಿಗೆ ಕಿವಿಮಾತು ಹೇಳಿದ ಅವರು, ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತದ ಪರಿಕಲ್ಪನೆಯಡಿ ಕೆಲಸ ಮಾಡೋಣ ಎಂದರು. ಈ ಸಂದರ್ಭದಲ್ಲಿ ಕಂಪನಿಯ ಹಿರಿಯ ಅಧಿಕಾರಿಗಳು ಹಾಜರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030