ನಿರುದ್ಯೋಗ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ; ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್…!!!

Listen to this article

ನಿರುದ್ಯೋಗ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ; ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್.

ಧಾರವಾಡ : ರಾಜ್ಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರಕಾರ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ವಿವಿಧ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಅವರು ಹೇಳಿದರು.

ಅವರು ಇಂದು ಬೆಳಿಗ್ಗೆ ವಿಶ್ವವಿದ್ಯಾಲಯದ ಆವರಣದಲ್ಲಿರುವ ಗಾಂಧಿಭವನದಲ್ಲಿ ಆಯೋಜಿಸಲಾದ 74ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

ವಿವಿಧ ಕೈಗಾರಿಕೆಗಳ ನಿರೀಕ್ಷೆಗೆ ತಕ್ಕಂತೆ ವಿದ್ಯಾರ್ಥಿಗಳಿಗೆ ಕೌಶಲ್ಯಗಳನ್ನು ಕಲಿಸುವ ನಿಟ್ಟಿನಲ್ಲಿ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು. ಉದ್ಯೋಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಬಿ.ಕಾಂ. ಪದವಿಯಲ್ಲಿ ಹೊಸ ನಾಲ್ಕು ವಿಭಾಗಗಳನ್ನು ತೆರಯಲಾಗಿದ್ದು, ಈಗಾಗಲೇ 1400 ವಿದ್ಯಾರ್ಥಿಗಳಿಗೆ ಪ್ರಶಿಕ್ಷಣಾರ್ಥಿ ಶಿಷ್ಯವೇತನ ನೀಡಲು ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ.

ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಡಿಜಿಟಲ್ ಲೈಬ್ರರಿ ಆರಂಭಿಸುವಂತೆ ತಿಳಿಸಿದರು. ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಏಕರೂಪದ ವೇಳಾಪಟ್ಟಿ ತರಲಾಗುತ್ತಿದೆ. ನಿರ್ದಿಷ್ಟ ಸಮಯಕ್ಕೆ ಪರೀಕ್ಷೆ ಹಾಗೂ ಫಲಿತಾಂಶ ಪ್ರಕಟಿಸಲಾಗುವುದು. ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸುತ್ತಿದೆಯೆಂದು ತಿಳಿಸಿದರು.
ವಿದ್ಯಾರ್ಥಿಗಳು ಆತ್ಮಸ್ಥೈರ್ಯದಿಂದ ಸವಾಲುಗಳನ್ನು ಎದುರಿಸಿ ಉನ್ನತ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕೆಂದು ಅವರು ತಿಳಿಸಿದರು.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಚೇರಮನ್ ಪ್ರೊ. ಎಸ್.ಅಯ್ಯಪ್ಪನ್ ಅವರು ಮಾತನಾಡಿ, ಕಾಯಕವೇ ಕೈಲಾಸ ತತ್ವ ಪಾಲನೆಯ ಮೂಲಕ ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತವಾದುದನ್ನು ಸಾಧಿಸಬೇಕು ಎಂದು ಹೇಳಿದರು.

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಗ್ರಾಮಸ್ವರಾಜ್ಯ ಕನಸನ್ನು ನನಸಾಗಿಸುವಂತೆ ಕರೆ ನೀಡಿದ ಅವರು ಉತ್ತಮ ಶಿಕ್ಷಣ ಮತ್ತು ಜ್ಞಾನ, ಕೌಶಲ್ಯಪೂರ್ಣತೆ, ನಾವೀನ್ಯತೆ ಮತ್ತು ಸೇವಾ ಮನೋಭಾವ ಇವು ಇಂದಿನ ನಿರ್ಣಾಯಕ ಕಾಲಘಟ್ಟದ ಅವಶ್ಯಕತೆಗಳಾಗಿವೆ ಎಂದರು. ಇಂದಿನ ದಿನಗಳಲ್ಲಿ ಸದಾ ಚರ್ಚೆಯಲ್ಲಿರುವ ಹವಾಮಾನ ಬದಲಾವಣೆ, ಪರಿಸರ ಮಾಲಿನ್ಯ, ನೈಸರ್ಗಿಕ ಸಂಪನ್ಮೂಲ ಅವನತಿ, ಹಸಿವು ಮತ್ತು ಅಪೌಷ್ಠಿಕತೆ, ಸಂಭವನೀಯ ರೋಗಗಳು, ಮೈಕ್ರೋಪ್ಲಾಸ್ಟಿಕ್ಸ್, ಜನಸಂಖ್ಯಾ ಪ್ರಮಾಣ ಬದಲಾವಣೆ, ವಲಸೆ ಇತ್ಯಾದಿಗಳು ನಮ್ಮ ಭವಿಷ್ಯದ ಸವಾಲುಗಳಾಗಿವೆ ಎಂದರು.

ಪ್ರವಾಹಗಳು ಮತ್ತು ಬರಗಾಲ, ಅಕಾಲಿಕ ಮಳೆ, ಭೂಕುಸಿತಗಳು, ತಾಪಮಾನ ಏರಿಕೆ ಹೆಚ್ಚು ಕಾಣುತ್ತಿದ್ದು, ವಿವಿಧ ಜೈವಿಕ ಮತ್ತು ಅಜೈವಿಕ ಒತ್ತಡಗಳು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಮನುಷ್ಯರನ್ನು ಭಾದಿಸುತ್ತಿದ್ದು, ಬಹು ಆಯಾಮಗಳ, ನಾವೀನ್ಯಪೂರ್ಣ ವಿಧಾನಗಳು ಮತ್ತು ಪರಿಹಾರೋಪಾಯಗಳು ಇಂದಿನ ಅನಿವಾರ್ಯ ಅಗತ್ಯತೆಯಾಗಿದೆ ಎಂದರು.

ನಮ್ಮ ಕೃಷಿ ಸಮುದಾಯಗಳ ಅನ್ನದಾತರು ತಮ್ಮ ಸಮರ್ಪಣಾ ಮನೋಭಾವ ಮತ್ತು ಕಠಿಣ ಪರಿಶ್ರಮದಿಂದ ಇಡೀ ದೇಶದ ಹಸಿವನ್ನು ನೀಗಿಸುತ್ತಾ ಬಂದಿದ್ದು, ಆಹಾರ ಭದ್ರತೆಯ ಭರವಸೆ ನೀಡಿರುವುದಲ್ಲದೆ, ದೇಶವನ್ನು ಇನ್ನಷ್ಟು ಬಲಿಷ್ಠ ಹಾಗೂ ಪ್ರಕಾಶಮಾನವಾಗಿಸಿದ್ದಾರೆ. ನಮ್ಮ ದೇಶದ 65 ಕೋಟಿಗಿಂತ ಹೆಚ್ಚು ಜನರು ಕೃಷಿ ಅವಲಂಬಿಸಿದ್ದು, ನಮ್ಮ ವಾರ್ಷಿಕ ಆಹಾರ ಉತ್ಪಾದನೆಯ 332 ಮಿಲಿಯನ್ ಟನ್ ಆಹಾರಧಾನ್ಯಗಳು, 355 ಮಿಲಿಯನ್ ಟನ್ ಹಣ್ಣು ಮತ್ತು ತರಕಾರಿಗಳು, 231 ಲೀಟರ್ ಹಾಲು, 10 ಮಿಲಿಯನ್ ಟನ್ ಮಾಂಸ, 18 ಮಿಲಿಯನ್ ಟನ್ ಮೀನು ಹಾಗೂ 120 ಬಿಲಿಯನ್ ಮೊಟ್ಟೆ ಇತ್ಯಾದಿಗಳು ಸೇರಿ 1000 ಮಿಲಿಯನ್ ಟನ್‍ಗಳಷ್ಟು ಆಹಾರವಾಗುತ್ತದೆ. ಉದ್ದಿಮೆಯಾಗಲಿ, ಇಂಧನವಾಗಲಿ, ಸಂವಹನವಾಗಲಿ, ಅಂತರ್ಜಾಲ ಆಧಾರಿತ ಕೃತಕ ಬುದ್ದಿಮತ್ತೆ ಅಥವಾ ನಾವೀನ್ಯಪೂರ್ಣ ಬದಲಾವಣೆಗಳ ಯಾವುದೇ ವಲಯವಾಗಿರಲಿ, ಅಲ್ಲಿ ಮಾನವ ಪ್ರತಿಭೆ, ಉತ್ಸಾಹ ಮತ್ತು ಉದ್ಯಮಶೀಲತೆಯು ಪುನರುಜ್ಜಿವನ ಗೊಳ್ಳುತ್ತಿರುವುದನ್ನು ಗಮನಿಸಬಹುದಾಗಿದೆ ಎಂದರು.

ಕುಲಪತಿ ಕೆ. ಬಿ. ಗುಡಸಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಕೆ.ಚನ್ನಪ್ಪ ಅವರು ಸುವರ್ಣ ಪದಕಗಳನ್ನು ಪಡೆದಿರುವ ವಿದ್ಯಾರ್ಥಿಗಳ ವಿವರವನ್ನು ನೀಡಿದರು. ಮೌಲ್ಯಮಾಪನ ಕುಲ ಸಚಿವ ನಿಜಲಿಂಗಪ್ಪ ಮಟ್ಟಿಹಾಳ ಅವರು ಪಿಎಚ್.ಡಿ.ಪದವಿ, ರ್ಯಾಂಕ್, ಶಿಷ್ಯವೇತನ ಮತ್ತು ನಗದು ಪಾರಿತೋಷಕ ಪ್ರಶಸ್ತಿ ಪ್ರಮಾಣವನ್ನು ಪಡೆದ ವಿದ್ಯಾರ್ಥಿಗಳ ವಿವರವನ್ನು ನೀಡಿದರು
ಕಾರ್ಯಕ್ರಮದಲ್ಲಿ ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಕರ್ನಾಟಕ ವಿಶ್ವವಿದ್ಯಾಲಯದ 74 ನೆ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮರೇಗುದ್ದಿಯ ನಿರುಪಾಧೀಶ ಮಹಾಸ್ವಾಮಿ, ಡಾ. ವೆಂಕಟ ಸತ್ಯ ವರ ಪ್ರಸಾದ ಚಿಗುರುಪಾಟಿ ಹಾಗೂ ಎಸ್.ಎನ್. ವೆಂಕಟಲಕ್ಷ್ಮೀ ನರಸಿಂಹರಾಜು ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ನೀಡಲಾಯಿತು.

ಕರ್ನಾಟಕ ವಿಶ್ವವಿದ್ಯಾಲಯದ 74 ನೆ ವಾರ್ಷಿಕ ಘಟಿಕೋತ್ಸವದಲ್ಲಿ ವಿವಿಧ ವಿಭಾಗದ ವಿಧ್ಯಾರ್ಥಿಗಳು ಅತೀ ಹೆಚ್ಚು ಪದಕಗಳನ್ನು ಪಡೆದವರ ವಿದ್ಯಾರ್ಥಿಗಳ ವಿವರ: ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿನಿ ಜಯಶ್ರೀ ತಳವಾರ ಅವರಿಗೆ 9 ಪದಕಗಳು ಮತ್ತು ಎರಡು ನಗದು ಪ್ರಶಸ್ತಿ ಹಾಗೂ ಮಮತಾ ಜಗದೀಶ ನಾಯ್ಡು ಅವರಿಗೆ 1 ಪದಕ ಪಡೆದಿದ್ದಾರೆ. ಕನ್ನಡ ಅಧ್ಯಯನ ವಿಭಾಗದ ವಿಧ್ಯಾರ್ಥಿನಿ ಸಂಗೀತಾ ರಾ ಲಕ್ಕಪ್ಪಣ್ಣನವರ ಅವರಿಗೆ 9 ಪದಕ ಮತ್ತು ಎರಡು ನಗದು ಪ್ರಶಸ್ತಿ ಪಡೆದಿದ್ದಾರೆ. ಜೀವರಸಾಯನ ಶಾಸ್ತ್ರ ವಿಭಾಗದ ವಿಧ್ಯಾರ್ಥಿನಿ ಹರ್ಷಿತಾ ಡಿ ಅವರಿಗೆ 8 ಪದಕಗಳು ಪಡೆದುಕೊಂಡರು. ಪ್ರಾಣಿಶಾತ್ರ ವಿಭಾಗದ ವಿಧ್ಯಾರ್ಥಿನಿ ವಿಸ್ಮಯ ಸಿ.ಅಂಗಡಿ ಅವರಿಗೆ 8 ಪದಕಗಳು ಮತ್ತು ಎರಡು ನಗದು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಲೈಬ್ರೆರಿ ಸೈನ್ಸ್ ವಿಭಾಗದ ವಿದ್ಯಾರ್ಥಿನಿ ರಚನಾ ಶಿವಳ್ಳಿ ಅವರಿಗೆ 8 ಪದಕಗಳು ಮತ್ತು ಒಂದು ನಗದು ಪ್ರಶಸ್ತಿಯನ್ನು ಪಡೆದಿದ್ದಾರೆ ಹಾಗೂ ವಿವಿಧ ವಿಭಾಗದ ವಿದ್ಯಾರ್ಥಿಗಳು ಚಿನ್ನದ ಪದಕ ಮತ್ತು ನಗದು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ…

ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend