ಚಿಕ್ಕೋಡಿ : ಟ್ರ್ಯಾಕ್ಟರ್ ಆಕಸ್ಮಿಕವಾಗಿ ಕೃಷ್ಣಾ ನದಿಯ ಪ್ರವಾಹದಲ್ಲಿ ಪಲ್ಟಿಯಾಗಿ ಇಬ್ಬರು ನಾಪತ್ತೆಯಾಗಿರುವ ಘಟನೆ ನೆರೆಯ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನ ಅಕ್ಕಿವಾಟ್ -ಬಸ್ತವಾಡ್ ರಸ್ತೆಯಲ್ಲಿ ನಡೆದಿದೆ.
ಅಕ್ಕಿವಾಟ್ – ಬಸ್ತವಾಡ್ ರಸ್ತೆಯಿಂದ ತೆರಳುತ್ತಿದ್ದ ಟ್ರ್ಯಾಕ್ಟರ್ ನಲ್ಲಿ ಒಟ್ಟು 8 ಮಂದಿ ಇದ್ದರು ಎಂದು ವರದಿಯಿಂದ ತಿಳಿದು ಬಂದಿದೆ.
ಅಕ್ಕಿವಾಟ್, ಗ್ರಾಮಕ್ಕೆ ಕುಡಿಯುವ ನೀರು ಒದಗಿಸುವ ಸಲುವಾಗಿ ಮೋಟಾರ್ ಸ್ಟಾರ್ಟ್ ಮಾಡಲೆಂದು ಈ ಟ್ರ್ಯಾಕ್ಟರ್ ಸಾಗುತ್ತಿತ್ತು. ಈ ವೇಳೆ ಕೃಷ್ಣಾ ನದಿಯಲ್ಲಿ ಉಂಟಾದ ಮಹಾಪೂರದಿಂದ ನೀರಿನ ಹರಿವಿಗೆ ಎಲ್ಲರೂ ಕೊಚ್ಚಿ ಹೋಗಿದ್ದಾರೆ.
ಘಟನೆಯ ಬಗ್ಗೆ ತಿಳಿದ ತಕ್ಷಣ ತಾಲೂಕು ಆಡಳಿತವು ಯಾಂತ್ರಿಕ ದೋಣಿ ಮೂಲಕ ವಿಪತ್ತು ನಿರ್ವಹಣಾ ಸಿಬಂದಿಯ ಸಹಾಯದಿಂದ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
8 ಮಂದಿಯ ಪೈಕಿ ಆರು ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನಿಬ್ಬರು ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.
ಘಟನಾ ಸ್ಥಳಕ್ಕೆ ಕೊಲ್ಲಾಪುರ ಜಿಲ್ಲಾ ಉಸ್ತುವಾರಿ ಅಶೀವ್ ಹಸನ್ ಮುಶ್ರಿಫ್ ಹಾಗೂ ಮಹಾರಾಷ್ಟ್ರದ ಸಂಸದ ಧೈರ್ಯಶೀಲ ಮಾನೆ ಭೇಟಿ ನೀಡಿದ್ದಾರೆ.
ನಾಪತ್ತೆಯಾದವರಲ್ಲಿ ಅಕ್ಕಿವಾಟ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಇಕ್ಬಾಲ್ ಬೈರಾಗದಾರ ಸಹ ಸೇರಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ…
ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030