ಕೋಟೆಕಲ್ಲ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 70 ಲಕ್ಷ ರೂ. ಲಾಭ…
ಗುಳೇದಗುಡ್ಡ: ಕೋಟೆಕಲ್ಲ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಶೇರುದಾರರ ಹಾಗೂ ಗ್ರಾಹಕರ ಸಹಕಾರದಿಂದಾಗಿ 2023-24ನೇ ಸಾಲಿನಲ್ಲಿ 70,91,195 ರೂ. ಲಾಭ ಗಳಿಸಿದ್ದು, ಶೇರುದಾರರಿಗೆ ಶೇ.12 ರಷ್ಟು ಡಿವಿಡೆಂಡ್ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಹನಮಂತ ಮಾವಿನಮರದ ಹೇಳಿದರು.
ಅವರು ಸೋಮವಾರ ಕೋಟೆಕಲ್ಲ ಗ್ರಾಮದ ಹೊಳೆಹುಚ್ಚೇಶ್ವರ ಮಠದ ಆವರಣದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 73ನೇ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾದಾಮಿ ತಾಲೂಕಿನಲ್ಲಿಯೇ ಉತ್ತಮ ಕೃಷಿ ಸಹಕಾರ ಸಂಘ ಎಂದು ಹೆಸರು ಪಡೆದ ಕೋಟೆಕಲ್ಲಿನ ಕೃಷಿ ಸಹಕಾರಿ ಸಂಘವು, ಕಳೆದ 20 ವರ್ಷಗಳಲ್ಲಿ ಸಾಕಷ್ಟು ಪ್ರಗತಿ ಕಂಡಿದೆ. ಸಂಘವು 4,007 ಸದಸ್ಯರನ್ನು ಹೊಂದಿದ್ದು, ರಾಜ್ಯದಲ್ಲಿಯೇ ಪ್ರಥಮವಾಗಿ 6.70 ಕೋಟಿ ರೂ. ವೆಚ್ಚದಲ್ಲಿ ರೈತ ಖರೀದಿ, ಶೇಖರಣೆ ಹಾಗೂ ಮಾರಾಟ ಕೇಂದ್ರವನ್ನು ಕೇಂದ್ರ ಸರಕಾರದ ರಾಷ್ಟ್ರೀಯ ಕೃಷಿ ಮಿಷನ್ ಯೋಜನೆಯಡಿ 3.15 ಕೋಟಿ. ರೂ. ಸಬ್ಸಿಡಿಯೊಂದಿಗೆ ನಿರ್ಮಿಸಲಾಗುತ್ತಿದೆ. ಅಲ್ಲದೆ ನಬಾರ್ಡ್ದಿಂದ ಸಾಲಪಡೆದು ಗುಳೇದಗುಡ್ಡ ಪಟ್ಟಣದಲ್ಲಿ ಮಾರಾಟ ಮಳಿಗೆ ನಿರ್ಮಿಸಲಾಗುತ್ತಿದೆ.
ಜನರಿಗೆ ಕೇವಲ ಸಾಲ ನೀಡುವುದು, ವಸೂಲಿ ಮಾಡುವುದಷ್ಟೇ ಅಲ್ಲ ಸಹಕಾರ ಸಂಘದಿಂದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೇಕಾರರಿಗಾಗಿ ಗುಳೇದಗುಡ್ಡಲ್ಲಿ ಕೈಮಗ್ಗ ಕೇಂದ್ರ ಪ್ರಾರಂಭಿಸಿ, ನೇಕಾರರಿಗೆ ಉದ್ಯೂಗ ನೀಡುವ ಯೋಜನೆಗೆ ಚಾಲನೆ ನೀಡಿದೆ ಎಂದರು.
ಹೊಳೆಹುಚ್ಚೇಶ್ವರ ಮಠದ ಶ್ರೀ ಹೊಳೆ ಹುಚ್ಚೇಶ್ವರ ಶ್ರೀಗಳು, ಅಮರೇಶ್ವರ ಮಠದ ಶ್ರೀ ನೀಲಕಂಠ ಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಲಕ್ಷ್ಮಣ ಹಾಲನ್ನವರ, ಸದಸ್ಯರಾದ ವೈ.ಆರ್. ತೊಗಲಂಗಿ, ಸಂಗಪ್ಪ ಹಡಪದ, ಮಾಗುಂಡಪ್ಪ ಸುಂಕದ, ನಾಗೇಶ ಮುರಗೋಡ, ಎಂ.ಎ. ಹಾವಡಿ, ಐ.ಬಿ.ರಾಠೋಡ, ದ್ಯಾಮಣ್ಣ ಗದ್ದನಕೇರಿ, ಎಸ್.ವಿ. ತಿಪ್ಪಾ, ಎನ್.ಪಿ. ಕಳ್ಳಿಗುಡ್ಡ, ಎಸ್.ಡಿ. ಅಬಕಾರಿ, ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಲ್ಯಾಣಿ ಇದ್ದರು…
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030