ಗುಜರಿ ಗಾಡಿಗಳನ್ನು ಓಡಿಸುತ್ತಿರುವ ಗುಳೇದಗುಡ್ಡ ಬಸ್ ಡಿಫೋ
ಚಲಿಸುತ್ತಿದ್ದ ಬಸ್ಸಿನ ಗಾಲಿಯ ನಟ್ಬೋಲ್ಟ್ ಬಿಚ್ಚಿಬಿದ್ದು : ಪ್ರಾಯಣಿಕರು ಪಾರು
ಗುಳೇದಗುಡ್ಡ: ಚಲಿಸುತ್ತಿದ್ದ ಬಸ್ಸಿನ ಗಾಲಿಯ ನಟ್ಬೋಲ್ಟ್ಗಳು ಬಿಚ್ಚಿಬಿದ್ದು, ಬಸ್ ನಿಯಂತ್ರಣ ತಪ್ಪಿದ ಪರಿಣಾಮ ಗಾಬರಿಗೊಂಡ ಪ್ರಾಯಾಣಿಕರು ಬಸ್ಸನ್ನು ನಿಲ್ಲಿಸಿದ್ದರಿಂದ ಅಪಾಯ ತಪ್ಪಿ, 75 ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಸಮೀಪದ ಬೂದನಗಡೆ ಗ್ರಾಮದ ಹತ್ತಿರ ಸೋಮವಾರ ಸಂಭವಿಸಿದೆ.
ಸೋಮವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಗುಳೇದಗುಡ್ಡದಿಂದ ಬಾಗಲಕೋಟೆ ಕಡೆಗೆ ಚಲಿಸುತ್ತಿದ್ದ ಗುಳೇದಗುಡ್ಡ ಘಟಕದ ಸಾರಿಗೆ ಸಂಸ್ಥೆಯ ಬಸ್ನಲ್ಲಿ ಸುಮಾರು 75ಕ್ಕೂ ಹೆಚ್ಚು ಜನರು ಕಿಕ್ಕಿರಿದು ಪ್ರಯಾಣಿಸುತ್ತಿದ್ದರು. ಬೂದನಗಡೆ ಗ್ರಾಮದ ಹತ್ತಿರ ದಿಬ್ಬದಿಂದ ಕೆಳಗೆ ಇಳಿಯುವಾಗ ಬಸ್ನ ಹಿಂದಿನ ಒಂದು ಗಾಲಿಯ ನಟ್ಬೋಲ್ಟ್ ಬಿಚ್ಚಿಬಿದ್ದಿದ್ದರಿಂದ ಬಸ್ನಲ್ಲಿದ್ದ ಪ್ರಯಾಣಿಕರಿಗೆ ಬಸ್ವಾಲುತ್ತಿರುವುದು ಕಂಡುಬಂದಿದ್ದರಿಂದ ಕೂಗಾಡಿ ಬಸ್ನ್ನು ನಿಲ್ಲಿಸಿದ್ದರಿಂದ ಅಪಾಯವಾಗುವುದು ತಪ್ಪಿದೆ.
ಗುಳೇದಗುಡ್ಡ ಡಿಪೋದಿಂದ ಹಳೆಯ ಬಸ್ಗಳನ್ನು ಓಡಿಸುತ್ತಿದ್ದಾರೆ ಇದರಿಂದ ಇಂತಹ ಅನೇಕ ಘಟನೆಗಳು ನಡೆದಿವೆ. ಪಟ್ಟಣದಿಂದ ನಿತ್ಯ ನೂರಾರು ವಿದ್ಯಾರ್ಥಿಗಳು, ಉದ್ಯೋಗಿಗಳು ಬಾಗಲಕೋಟೆಗೆ ಹೋಗಿಬರುವುದು ಮಾಡುತ್ತಿದ್ದು ಸ್ಥಳೀಯ ಬಸ್ ಘಟಕವು ಸರಿಯಾಗಿ ಬಸ್ಗಳನ್ನು ಓಡಿಸುತ್ತಿಲ್ಲ. ಹಳೆಯ ಬಸ್ಗಳನ್ನು ಓಡಿಸುತ್ತಿದ್ದಾರೆ, ಬಸ್ಗಳನ್ನು ಪರಿಶೀಲನೆ ಮಾಡಿ ಓಡಿಸುತ್ತಿಲ್ಲ, ಇದೇ ಬಸ್ ನಿನ್ನೆ ಬ್ರೆಕ್ ಫೇಲಾಗಿ ಕೆಟ್ಟು ನಿಂತಿತ್ತು. ಈ ರೀತಿ ಹಲವಾರು ಬಾರಿ ಬಸ್ಗಳ ಸಮಸ್ಯೆ ಉಂಟಾಗುತ್ತಿದ್ದರೂ ಬಸ್ ಡಿಪೋದವರು ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರಿದ ಪ್ರಯಾಣಿಕರು ಈ ಮಾರ್ಗದಲ್ಲಿ ಚಲಿಸುತ್ತಿದ್ದ ಬಸ್ಗಳನ್ನು ತಡೆದು ಪ್ರತಿಭಟಿಸಿ, ಬಸ್ ಡಿಪೋ ವ್ಯವಸ್ಥಾಪಕರು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು. ಪ್ರತಿಭಟನಾಕಾರರು ಸಾಕಷ್ಟು ಬಾರಿ ಫೋನ್ ಕರೆ ಮಾಡಿದಾಗ ವ್ಯವಸ್ಥಾಪಕಿ ವಿದ್ಯಾನಾಯಕ ಸ್ಥಳಕ್ಕೆ ಆಗಮಿಸಿದರು.
ಬಸ್ ಡಿಫೋದಿಂದ ಸರಿಯಾಗಿ ಬಸ್ಗಳನ್ನು ಓಡಿಸುತ್ತಿಲ್ಲ ಇಂತಹ ಘಟನೆಗಳು ನಡೆದರೆ ಯಾರು ಜವಾಬ್ದಾರರು? ವಿದ್ಯಾರ್ಥಿಗಳು, ಕೂಲಿಕಾರರು ಬಸ್ನಲ್ಲಿ ಸಂಚರಿಸುತಿದ್ದಾರೆ ಅವರ ಜೀವಕ್ಕೆ ಅಪಾಯವಾದರೆ ಯಾರು ಜವಾಬ್ದಾರರು ಎಂದು ಬಸ್ಡಿಪೋ ವ್ಯವಸ್ಥಾಪಕಿಯನ್ನು ಪ್ರಯಾಣಿಕರು ತರಾಟೆಗೆ ತೆಗೆದುಕೊಂಡರು. ಬಸ್ ವ್ಯವಸ್ಥಾಪಕಿ ವಿದ್ಯಾ ನಾಯಕ ಅವರು ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದಾಗ, ಇಂತಹ ಬಾಯಿಮಾತಿನ ಭರವಸೆಗಳು ಬೇಡ, ಈ ಬಗ್ಗೆ ಲಿಖಿತವಾಗಿ ಬರೆದುಕೊಡುವಂತೆ ಪ್ರಯಾಣಿಕರು ಪಟ್ಟು ಹಿಡಿದರು. ಆಗ, ಇನ್ನುಮುಂದೆ ಡಿಫೋದಿಂದ ಬಸ್ ಹೊರಗೆ ಬಿಡುವಾಗ ಪರಿಶೀಲನೆ ಮಾಡಿ ಹೊರಗೆ ಕಳುಹಿಸುತ್ತೇವೆ. ಇಂತಹ ಘಟನೆ ಮತ್ತೆ ಮರುಕಳಿಸದಂತೆ ನೋಡಿಕೊಡುತ್ತೇವೆ ಎಂದು ಲಿಖತವಾಗಿ ಪ್ರಯಾಣಿಕರಿಗೆ ಬರೆದುಕೊಟ್ಟರು.
ಬಾಗಲಕೋಟೆಯ ಸಾರಿಗೆ ಘಟಕದ ಮೆಕ್ಯಾನಿಕಲ್ ವಿಭಾಗೀಯ ಮ್ಯಾನೇಜರ್ರೊಂದಿಗೆ ಫೋನ್ ಮೂಲಕ ಮಾತನಾಡಿದ ಪ್ರಯಾಣಿಕರು, ಬಸ್ ಡಿಫೋ ಅಧಿಕಾರಿಗಳು ಪ್ರಯಾಣಿರೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಇವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಗುಳೇದಗುಡ್ಡ ಬಸ್ ಡಿಪೋ ಘಟಕದಲ್ಲಿ ಹಳೆ ಬಸ್ಗಳಿದ್ದು, ಇದರಿಂದ ಬಸ್ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಅಲ್ಲಲ್ಲಿ ಬಸ್ಗಳು ಕೆಟ್ಟು ನಿಲ್ಲುತ್ತವೆ. ಸಣ್ಣಪುಟ್ಟ ಅಪಘಾತಗಳು ನಡೆದಿವೆ. ಕೂಡಲೇ ಬಸ್ ಡಿಪೋಕ್ಕೆ ಹೊಸ ಬಸ್ಗಳನ್ನು ನೀಡಬೇಕು ಎಂದು ಶಾಸಕ ಭೀಮಸೇನ್ ಚಿಮ್ಮನಕಟ್ಟಿ ಅವರಿಗೆ ಪ್ರಯಾಣಿಕರು, ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಘಟನೆಯ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಘಟನೆಯ ಬಗ್ಗೆ ವರದಿ ನೀಡುವಂತೆ ಮೆಕ್ಯಾನಿಕಲ್ ವಿಭಾಗೀಯ ಮ್ಯಾನೇಜರ್ ಅವರಿಗೆ ಹೇಳಿದ್ದೇನೆ. ವರದಿ ಬಂದ ಬಳಿಕ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಲಾಗುವುದು – ನಿತೀನ ಹೆಗಡೆ, ವಾ..ಕ..ರ.ಸಾ..ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಬಾಗಲಕೋಟ ವಿಭಾಗ..
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030