ಧಾರವಾಡ: ಧಾರವಾಡ ಜಿಲ್ಲೆಯ 66 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶ ಹೊರಡಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಮಲಪ್ರಭಾ ಬಲದಂಡೆ ಕಾಲುವೆಯಿಂದ ಬರುತ್ತಿರುವ 600 ಕ್ಯುಸೆಕ್ಸ್ ನೀರು.
ಬರಗಾಲದಿಂದ ತತ್ತರಿಸಿರುವ ಧಾರವಾಡ ಜಿಲ್ಲೆಯ ಜನರಿಗೆ ಕುಡಿಯುವ ನೀರು ಒದಗಿಸುವುದಕ್ಕಾಗಿ ಹಾಗೂ ಜಿಲ್ಲೆಯ ಹಲವೆಡೆ ಉಂಟಾಗಿರುವ ನೀರಿನ ಹಾಹಾಕಾರ ತಪ್ಪಿಸುವ ಉದ್ದೇಶಕ್ಕಾಗಿ ಧಾರವಾಡ ಜಿಲ್ಲೆಯ 58 ಕೆರೆಗಳನ್ನು ಭರ್ತಿ ಮಾಡುವ ನಿರ್ಧಾರವನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಕೈಗೆತ್ತಿಕೊಂಡಿದ್ದಾರೆ
ನವಲಗುಂದ ತಾಲೂಕಿನ 37, ಅಣ್ಣಿಗೇರಿಯ 13, ಹುಬ್ಬಳ್ಳಿಯ 7 ಹಾಗೂ ಕುಂದಗೋಳ ತಾಲೂಕಿನ 3 ಕೆರೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅದಕ್ಕಾಗಿ ಮಲಪ್ರಭಾ ಬಲದಂಡೆ ಕಾಲುವೆಯಿಂದ ಮಂಗಳವಾರ 600 ಕ್ಯುಸೆಕ್ಸ್ ನೀರು ಬಿಡುಗಡೆಯಾಗುತ್ತಿದೆ. ಈ ನೀರನ್ನು ಜನ, ಜಾನುವಾರುಗಳಿಗೆ ಕುಡಿಯುವ ಸಲುವಾಗಿಯೇ ಬಳಕೆ ಮಾಡಿಕೊಳ್ಳಬೇಕು ಅದರ ಹೊರತು ಇನ್ನ್ಯಾವುದೇ ಕೆಲಸಕ್ಕೂ ಬಳಕೆ ಮಾಡಬಾರದು ಎಂದು ಜಿಲ್ಲಾಧಿಕಾರಿಗಳು ಈ ಮೊದಲೇ ತಿಳಿಸಿದ್ದು, ಜನರು ಈ ನೀರನ್ನು ಬೇರೆ ಕಾರಣಕ್ಕೆ ಉಪಯೋಗಿಸಬಾರದು ಎಂದು ಒಟ್ಟು 66 ಗ್ರಾಮಗಳಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದಾರೆ.
ಇಂದಿನಿಂದ 10 ದಿನಗಳ ಕಾಲ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಹಾಗೂ ನರಗುಂದ ಶಾಖಾ ಕಾಲುವೆ ಮುಖಾಂತರ ಮಲಪ್ರಭಾ ನೀರು ಹರಿದು ಬರಲಿದೆ. ಈ ನೀರನ್ನು ರೈತರ ಬೇರೆ ಕಾರಣಕ್ಕೆ ಬಳಕೆ ಮಾಡದಂತೆ ಬಂದೋಬಸ್ತ್ ಮಾಡಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿಯೇ 144 ಸೆಕ್ಷನ್ ಜಾರಿ ಮಾಡಿದ್ದಾರೆ.
ರಾಜ್ಯ ಸರ್ಕಾರದಿಂದ ಕುಡಿಯುವ ನೀರು ಪೂರೈಕೆಗೆ ಕ್ರಮ
ಧಾರವಾಡ, ಅಳ್ನಾವರ, ಹುಬ್ಬಳ್ಳಿ ಗ್ರಾಮೀಣ, ಅಣ್ಣಿಗೇರಿ, ಕುಂದಗೋಳ, ನವಲಗುಂದ, ಕಲಘಟಗಿ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಣನೀಯವಾಗಿ ಹೆಚ್ಚಾಗಿದೆ. ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಧಾರವಾಡ ವಲಯದ 17 ಗ್ರಾಮಗಳು ಹಾಗೂ ಹುಬ್ಬಳ್ಳಿ ವ್ಯಾಪ್ತಿಯ 16 ವಲಯಗಳನ್ನು ಗುರುತಿಸಲಾಗಿದೆ. ಹುಬ್ಬಳ್ಳಿ ವಲಯದಲ್ಲಿ ಗುರುತಿಸಲಾಗಿರುವ ಗ್ರಾಮಗಳಲ್ಲಿ ಉಮಚಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಅತಿ ಹೆಚ್ಚಾಗಿದೆ.
ಕುಂದಗೋಳದಲ್ಲಿ 15 ಗ್ರಾಮಗಳು, ಕಲಘಟಗಿಯಲ್ಲಿ 54, ನವಲಗುಂದದಲ್ಲಿ 16 ಗ್ರಾಮಗಳು, ಅಣ್ಣಿಗೇರಿಯಲ್ಲಿ 12 ಹಾಗೂ ಅಳ್ನಾವರ ತಾಲೂಕಿನಲ್ಲಿ 9 ಗ್ರಾಮಗಳು ಸೇರಿ ಒಟ್ಟು 139 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಈ ಗ್ರಾಮಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರ, ಈಗಾಗಲೇ ಜಿಲ್ಲೆಗೆ 2 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದೆ. ಜೊತೆಗೆ, ಬರಪೀಡಿತ ಪ್ರತಿ ತಾಲೂಕಿಗೆ ತಲಾ 25 ಲಕ್ಷದಂತೆ ಬಿಡುಗಡೆ ಮಾಡಿದೆ…
ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030